Tuesday, January 8, 2013

ಅತ್ಯಾಚಾರದ್ದೆಂಥ ಮನಸ್ಥಿತಿ...?!

        ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಅತ್ಯಾಚಾರದ ಬಗ್ಗೆ ಮಾತು. ಬಹುತೇಕ ಪುರುಷರು ಇದಕ್ಕೆ ಕಾರಣ ಹೆಣ್ಣು ಮಕ್ಕಳು ತೊಡುವ ಬಟ್ಟೆಗಳೇ ಎಂಬಂತಾಗಿ ಮಾತನಾಡುತ್ತಿರುವುದು ಗಮನಕ್ಕೆ ಬಂತು. ತುಂಬಾ ಬೇಸರವೂ ಆಯಿತು. ಪುರುಷರ ಮನೋ ವಿಕೃತಿಗೆ ಹೆಣ್ಣು ಮಕ್ಕಳ ಬಟ್ಟೆಯೇ ಕಾರಣ ಎಂತಾದಲ್ಲಿ, ಹೊರದೇಶಗಳ ಹೆಣ್ಣು ಮಕ್ಕಳು ಶೇಕಡಾ 90 ರಷ್ಟು ಜನ ಅತ್ಯಾಚಾರಕ್ಕೆ ಗುರಿಯಾಗಬೇಕಿತ್ತಲ್ಲವೇ....?!  ಯಾಕೆ ಹಾಗಾಗುತ್ತಿಲ್ಲ...? ಅಲ್ಲಿರುವವರೆಲ್ಲ ಪುರುಷ ಪುಂಗವರಲ್ಲವೆ...??!!
        ಇಂತಹ ಕೆಟ್ಟ ಕೃತ್ಯದ ಹಿಂದೆ ಕೃತ್ಯ ಎಸಗಿದವರ ಮನಸ್ಥಿತಿಯಿರುತ್ತದೆಯೇ ವಿನಃ ಹೆಣ್ಣಿನ ಬಟ್ಟೆಯಲ್ಲ. ಇಲ್ಲಿವರೆಗೆ ಆದ ಅತ್ಯಾಚರಗಳೆಲ್ಲಾ ಕೇವಲ ತುಂಡು ಬಟ್ಟೆ ತೊಟ್ಟವರ ಮೇಲೆಯೇ ಆಗಿದ್ದರೆ ಅವರ ಮಾತಿಗೆ ಸೊಪ್ಪು ಹಾಕಬಹುದಿತ್ತು. ತುಂಡು ಬಟ್ಟೆ ತೊಡುವುದು ಸರಿ ಎಂದು ನಾನು ವಾದಿಸುತ್ತಿಲ್ಲ. ಅದು ಹುಡುಗರಿಗೆ ಪ್ರಚೋದಕಕಾರಿ ಯಾಗಿರಬಹುದು. ಆದರೆ ಅಷ್ಟು ಮಾತ್ರ ಮನೋ ನಿಗ್ರಹ ವಿಲ್ಲದೆ ಒಂದು ಹೆಣ್ಣಿನ ಮೇಲೆರಗಿ ಅಷ್ಟು ಹೀನಾಯವಾಗಿ ತೃಷೆ ತೀರಿಸಿಕೊಳ್ಳುವಷ್ಟು ಪ್ರಚೋದಿಸುತ್ತದೆ ಎಂದರೆ ಆ ಮನಸ್ಸು ಎಷ್ಟು ವಿಕೃತಿಗೆ ಹೋಗಿರಬಹುದು ಎಂಬುದನ್ನು ನೋಡಬೇಕಷ್ಟೇ...?! ಪ್ರತಿಯೊಬ್ಬರೂ ಅವರು ಬೆಳೆದ ಪರಿಸರದಿಂದ ಪ್ರಾಭಾವಿತರಗುತ್ತಾರೆ. ಅವರ ಮನಸ್ಥಿತಿ ಆ ಪರಿಸರದ ಮೇಲೆ ಅವಲಂಬಿತವಾಗಿಯೇ ಬೆಳೆದಿರುತ್ತದೆ. ಮನೆಯಲ್ಲಿ ಒಳ್ಳೆಯ ವಾತವರಣದಲ್ಲಿ ಬೆಳೆದರೂ ಕೂಡ ಹೊರಗಿನ ಗೆಳೆಯರ ಸಂಗ ವ್ಯಕ್ತಿಯನ್ನು ಕೆಟ್ಟ ಆಲೋಚನೆಗಳಿಗಿಳಿಸಿ ಅವನ ಮನಸ್ಥಿತಿಯನ್ನು ಕದಡಿ ವಿರೂಪಗೊಳಿಸಬಹುದು. ಒಟ್ಟಿನಲ್ಲಿ ಕೆಟ್ಟ ಮನಸ್ಥಿತಿಯೇ ಈ ವಿಕೃತಿಗೆ ಕಾರಣವೇ ಹೊರತು ಹೆಣ್ಣಿನ ಬಟ್ಟೆಯಲ್ಲ. ವಿಕೃತ ಮನಸ್ಸಿನ ಒಂದು ಗಂಡು ಮೈ ತುಂಬಾ ಬಟ್ಟೆ ತೊಟ್ಟು ಗೌರವಯುತವಾಗಿರುವ ಮಹಿಳೆಯನ್ನೂ ಸಹ ಬೆತ್ತಲಾಗಿ ಕಲ್ಪಿಸಿಕೊಳ್ಳಬಲ್ಲ...!! ಅದರಿಂದ ವಿಕೃತ ಆನಂದವನ್ನು ಪಡೆಯಲೂ ಬಲ್ಲ.... ಅಂತಹ ಮನಕ್ಕೆ ಯಾವ ಹೆಣ್ಣಾದರೂ ಆದೀತು. ಅವರ ಮುಂದೆ ಬಟ್ಟೆ ಎಂಬುದು ಅಡ್ಡವಾಗುವುದೇ ಇಲ್ಲ... ಆ ಸಮಯದ ಸುಖವಷ್ಟೇ ಅವರಿಗೆ ಬೇಕಾಗಿರುವುದು.... ಆ ವಿಕೃತಿಗೆ ಹೆಣ್ಣು ಬಲಿಯಾಗುತ್ತಾಳೆ ಅಷ್ಟೇ.....
        4-5 ವರ್ಷದ ಹೆಣ್ಣು ಮಕ್ಕಳ ಮೇಲೆಲ್ಲಾ ಅತ್ಯಾಚಾರ ಎಸಗುವಂತ ರಕ್ಕಸ ಮನ ಅದೆಷ್ಟು ಹೊಲಸಾಗಿ, ಕೆಟ್ಟದಾಗಿ, ವಿಕೃತವಾಗಿ ಇರಬಹುದೆಂದು ಯೋಚಿಸಿ.... ಮಗು ಎಂಬ ಭಾವನೆಯೂ ಇಲ್ಲದೆ ಅದನ್ನೂ ತನ್ನ ಕೆಟ್ಟ ತೃಷೆ ತೀರಿಸಿಕೊಳ್ಳಲು ಉಪಯೋಗಿಸಿಕೊಳ್ಳುವಂಥ ಮಟ್ಟಕ್ಕೆ ಮನುಷ್ಯ ಇಂದು ಬೆಳೆದು ನಿಂತಿದ್ದಾನೆ...! ಇಂತಹ ಗಂಡಸರಿಗೆ  ಬಯ್ಯಲು ಶಬ್ದ, ಕೊಡಲು ಶಿಕ್ಷೆಯುಂಟೆ ಈ ಪ್ರಪಂಚದಲ್ಲಿ....??? ಹಲವರು ಹೇಳಿದಂತೆ ಪುರುಷತ್ವ ಹರಣ ಶಿಕ್ಷೆ ಯೋಗ್ಯವಾದದ್ದೇ ಹೌದಾದರೂ ಎಲ್ಲಾ ಕಳೆದುಕೊಂಡ ಹೆಣ್ಣುಮಕ್ಕಳ, ಆ ಪುಟ್ಟ ಕಂದಮ್ಮಗಳ ಜೀವ, ಜೀವನವನ್ನು ಹಿಂದಕ್ಕೆ ತರಲಾದೀತೇ...! ನಮಗೆ ಪತ್ರಿಕೆ ಗಳಲ್ಲಿ ಆ ಬಗ್ಗೆ ಓದುವಾಗಲೇ ಅಷ್ಟು ನೋವಾಗುವಾಗ ಆ ಕಂದ ಅದೆಷ್ಟು ನೋವನುಭವಿಸಿರುತ್ತೋ...... ಆ ತಿಳಿಯದ ಸಹಿಸಲಾಗದ ವಯಸ್ಸಿನಲ್ಲಿ......
         ನನಗೆ ಇಂತಹ ಘಟನೆಗಳನ್ನು ಕೇಳಿದಾಗೆಲ್ಲ ಯಾವಾಗಲೂ ಕಾಡುವ ಪ್ರಶ್ನೆ - ಅವರಿಗೆ ಅಷ್ಟು ಕೆಟ್ಟ ಮನಸ್ಥಿತಿ ಇದ್ದು, ನಿಯಂತ್ರಿಸಿಕೊಳ್ಳಲಾಗದ  ರಕ್ಕಸ ಬುದ್ದಿಯಿದ್ದರೆ, ತಣಿಸಲಿಕ್ಕಾಗೇ  ಇರುತ್ತಾರಲ್ಲ ಬೇಕಷ್ಟು ಮಂದಿ...ಅವರ ಬಳಿ ಹೋಗದೇ ಪಾಪಕ್ಕಿಲ್ಲದ ಹೆಣ್ಣು ಮಕ್ಕಳ ಮೇಲೆರಗಿ ಅವರನ್ನೇಕೆ ಬಲಿ ಕೊಡುತ್ತಾರೆ...?! ದುಡ್ಡಿಲ್ಲದೇ ಕೆಲಸವಾದೀತೆಂದೇ ..?!!? 

       

Tuesday, December 4, 2012

ಪ್ರೀತಿಯ ನನ್ನವರಿಗೆ.......

       ನೀವಿರದ ಒಂದೊಂದು ಕ್ಷಣದಲ್ಲೂ ನನ್ನ ಮನದ ಪರದೆಯಲ್ಲೆಲ್ಲ ಬರೀ ನಿಮ್ಮ ರೂಪ... ಬೆಳಗ್ಗೆ ನಿಮ್ಮನ್ನು ರಮಿಸಿ ಎಬ್ಬಿಸಿ ಆಫೀಸಿಗೆ ಹೊರಟಾಗಿನಿಂದ ನಿಮ್ಮ ಧ್ಯಾನ ಶುರು ಆದರೆ  ಮತ್ತೆ ಸಂಜೆ ಮನೆಗೆ ಬಂದರೂ ನಿಮ್ಮದೇ ಗುಂಗು.... ಮನೆಗೆ ಬಂದು ಅಡುಗೆ  ಮಾಡುವಾಗಲೂ ನಿಮ್ಮ  ಮುದ್ದು ಮುಖ ಕಣ್ಣೆದುರೇ.... ಸ್ವಲ್ಪ ಹೊತ್ತೂ ಕೂಡ ನಿಮ್ಮನ್ನು ನನ್ನ ಸ್ಮೃತಿಯಿಂದ ಪಕ್ಕಕ್ಕಿರಿಸಲು ನನ್ನಿಂದಾಗದು.... ಅದೆಷ್ಟು ಸಲ ಗಡಿಯಾರ ನೋಡಿರುತ್ತೇನೆ ಗೊತ್ತಾ...? ನೀವು ಬರುವ ಸಮಯ ಮೀರಿ ಗಡಿಯಾರದ ದೊಡ್ಡ ಮುಳ್ಳು ಒಂದಂಕೆ ಮುಂದೆ ಹೋದರೂ ಅದೇನೋ ಅಸಹನೆ.... ಅಡುಗೆ ಮುಗಿಸಿ ಕುಳಿತವಳಿಗೆ ದಿನ ಪತ್ರಿಕೆ ಓದಲೂ ಸಾಧ್ಯವಾಗದೆ ಹೋಗುತ್ತದೆ.... ಕಂಗಳು ಕ್ಷಣಕ್ಕೊಮ್ಮೆ ಗಡಿಯಾರ ನೋಡುವುದ ಬಿಟ್ಟರೆ ತಾನೇ ಮತ್ತೇನಾದರೂ ಮಾಡಲಾಗುವುದು...! ಏಕೆ ಬರಲಿಲ್ಲವೋ, ಏನಾಯಿತೋ ಎಂಬ ಕಳವಳವಲ್ಲ ಅದು... ಈ ಸಮಯದೊಳಗೆ ಬರುತ್ತೀರೆಂದು ಮನಸ್ಸಿಗೆ ಗೊತ್ತಲ್ಲಾ, ಆ ಸಮಯವಾದೊಡನೆ ಮನ ನಿಮ್ಮ ಮುದ್ದು ಮುಖ ನೋಡಲು ತವಕಿಸುತ್ತದೆ... ಕುಳಿತಲ್ಲಿ ಕುಳಿತಿರಲಾಗದೆ ಬಂದ ಬೈಕ್ ಸದ್ದನ್ನೆಲ್ಲ ಆಲಿಸುತ್ತವೆ ಕಿವಿಗಳು...
 
       ಅದು ಹೇಗೆ ಒಂದು ಕ್ಷಣವೂ ಮನಸ್ಸಿನಿಂದ ಹೊರ ಹೋಗದೆ ಕುಳಿತಿರುತ್ತೀರೋ, ನಾ ಕಾಣೆ... ಗಂಡ-ಹೆಂಡತಿ ಎಂಬ ಅವಿನಾಭಾವ ಸಂಬಂಧ ನಿಜಕ್ಕೂ ಅದ್ಭುತ... ಬಂದ ಮುನಿಸು ತಣ್ಣಗಾಗಿ ಕಣ್ಣಂಚಿನಲ್ಲಿ ನೀರಾಡುತ್ತಲ್ಲಾ ಅದರಲ್ಲೆಲ್ಲಾ ನಿಮಗೆ ಪ್ರೀತಿಯ ಧಾರೆಯಿರುತ್ತೆ... ಆ ಕ್ಷಣದಲ್ಲಿ ಮೂಡುವ ಪ್ರೀತಿಯಿದೆಯಲ್ಲಾ........ಅದನ್ನು ಹೇಗೆ ಹೇಳಲಿ ನಿಮಗೆ.... !! ವರ್ಣಿಸಲಾಗದ, ಜಗತ್ತಿನ ಅತ್ಯಂತ ಅದ್ಭುತ ಭಾವನೆ ಅದು... ಹೊಟ್ಟೆಯಾಳದಿಂದ ಏನೋ ಪ್ರೀತಿಯ ಝಳಕು ಬಂದು ಮೈಯೆಲ್ಲಾ ಕಂಪನವೋ, ರೋಮಾಂಚನವೋ.... ಅದೇನೋ ಹೇಳಲಾಗದು.... ಅನುಭವಿಸಿಯೇ ತಿಳಿಯಬೇಕು...! ಅದಕ್ಕೇ ಏನೋ ನನ್ನ ಮನ ನನ್ನರಿವಿಗೆ ಬಾರದಂತೆಯೇ ಆಗಾಗ ಮುನಿಸಿಕೊಳ್ಳುವುದು, ಕಣ್ಣಾಲಿಗಳು ನೀರಾಗುವುದು.......

       ನಿಮ್ಮೊಡನೆ ಸಪ್ತಪದಿಯಿಟ್ಟು ಸಪ್ತ ಮಾಸಗಳು ಅದೆಷ್ಟು ಬೇಗ ಜಾರಿದವೋ...... ಸಪ್ತ ಜನ್ಮದಲ್ಲೂ ನನ್ನ ಪ್ರೀತಿಗೆ ನೀವೇ ಪ್ರತಿ ಪ್ರೀತಿ ಕೊಡುವಂತಾಗಲಿ, ನಮ್ಮಿಬ್ಬರ ನಡುವೆ ಪ್ರೀತಿಯ ಪ್ರವಾಹ ಎಂದೆಂದೂ ಹೀಗೆಯೇ ಪ್ರವಹಿಸುತ್ತಿರಲೆಂದು ಕಾಣದ ದೇವರಲ್ಲಿ ನನ್ನ ಭಕ್ತಿಪೂರ್ವಕ ಬಿನ್ನಹ....


ನಿಮ್ಮ ಕೆನ್ನೆಯ ಕೆಂಪಿನಲ್ಲಿದೆ 
                 ನನ್ನ ಪ್ರೀತಿ......
ನಿಮ್ಮ ಮೀಸೆಯಂಚಿನ ನಸು ನಗುವಿನಲ್ಲಿದೆ 
                 ನನ್ನ ಪ್ರೀತಿ......
ನಿಮಗೆ ಮುದ್ದಿನಿಂದ ಗದರುವಲ್ಲಿದೆ 
                 ನನ್ನ ಪ್ರೀತಿ.......
ನಿಮ್ಮ ಮುಂಜಾನೆಯ ಕನವರಿಕೆಯಲ್ಲಿದೆ 
                 ನನ್ನ ಪ್ರೀತಿ....... 
ನಿಮ್ಮ ಪ್ರತೀ ಹೆಜ್ಜೆ ಹೆಜ್ಜೆಯಲ್ಲೂ ಇದೆ 
                 ನನ್ನ ಪ್ರೀತಿ........


ಕಾವ್ಯಾ :) 

Tuesday, June 5, 2012

ಸುಮ್-ಸುಮ್ನೆ ಯಾಕೋ....

















ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಮುತ್ತುಗರೆದವನೆಬ್ಬಿಸುವಾಗ, ಮತ್ತಿನ
ಮುಗುಳುನಗೆಯ ಸುಂದರಾಂಗನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಮುಸ್ಸಂಜೆಯ ದೇವರ ನಾಮದೊಳಿರೆ,
ಹಿಂದಿನಿಂದಪ್ಪಿದ ಮುದ್ದು ಕೃಷ್ಣನ 
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಹಸಿದೊಡಲಿಗುಣಬಡಿಸುವಾಗಲೊಮ್ಮೆ,
ಮೆಚ್ಚುಗೆಯಿಂದ ನೋಡುವ ಪತಿ ದೇವನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಸಿಟ್ಟಿನಲಿ ರಚ್ಚೆ ಹಿಡಿದವಳ, ಪ್ರೀತಿಯಿಂ-
ದೋಲೈಸುವ ಚಿಗುರು ಬೆರಳವನ 
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಸಹಚಾರಿಣಿಯ ಹುಡುಗಾಟವ ಸಹಿಸಿ,
ಗದರದೇ ನಗುವ ಮುಗ್ಧನ 
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಮಡಿಲಲ್ಲಿ ಮಗುವಂತೆ ಮಲಗಿ, ನಿದ್ದೆಯಲಿ
ಕನವರಿಸಿ ಮುದ್ದಿಸುವ ಸುಕುಮಾರನ 
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಬದುಕಿನ ಸೌಧ ಕಟ್ಟಲು, ಪ್ರೀತಿಯ
ನೌಕೆ ಹೊತ್ತು ತಂದ ಸರದಾರನ 
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....


























ಕಾವ್ಯಾ :) 

Wednesday, March 21, 2012

ಕಲೆ - ಕಲಿ...


















ಮನ ತುಡಿಯಬೇಕು...
   ಹೃದಯ ಮಿಡಿಯಬೇಕು.....
ಅನುರಾಗ ಅರಳಬೇಕು
    ಓ ಮನವೇ....
Learn to FEEL......

ಮನಕೆ ಮನ ಜೊತೆಯಾಗಿ  
    ಪ್ರೀತಿಯು ಒರತೆಯಾಗಿ....
ಭಾವ ಚಿಮ್ಮಬೇಕು...
    ಓ ಮನವೇ....
Learn to EXPRESS.....

ಹಂಚಿಕೋ ಮನವೇ ನಿನ್ನ ಸಂತಸ....
    ಹೊಮ್ಮುವುದಾಗ ಉಲ್ಲಾಸ...
ಅರಿತುಕೋ ನಿನ್ನೊಲವಿನ ಮನಸ.... 
    ಓ ಮನವೇ....
Learn to share the JOY.....

ಮನವೆಂಬ ತ್ರಿಜ್ಯಗಳೆರಡು ಬೆಸೆದಾಗ...
    ಪ್ರೀತಿಯ ವ್ಯಾಸವದು ವಿಶಾಲ...
ಹಂಚಿಕೋ ನಿನ್ನಾಳದ ಒಲವ....
    ಓ ಮನವೇ....
Learn to ENJOY....



ಕಾವ್ಯಾ :)


Wednesday, January 25, 2012

ಹೊಸ ಬಾಳಿಗೆ ನೀ ಜೊತೆಯಾದೆ.... ಹೊಸ ಆನಂದ ನೀನಿಂದು ತಂದೆ....


ನನ್ನ ಬಾಳಿಗೆ ಬಣ್ಣ ತುಂಬಲು ಬರುತ್ತಿರುವ ನಿನಗಾಗಿ..........
       ನಿನಗಾಗಿ ಬರೆದ ಕೆಲವಾರು ಲೇಖನಗಳು ಈಗಾಗಲೇ ನನ್ನ ಬ್ಲಾಗಿನಲ್ಲಿವೆ. ನನ್ನ ಬರವಣಿಗೆಗಳು ಬ್ಲಾಗ್ ರೂಪ ಪಡೆಯಲು ಕಾರಣ ನೀನು.... ಬ್ಲಾಗ್ ಬರೆಯಲು ಶುರು ಮಾಡು ಎಂಬ ನಿನ್ನ ಒತ್ತಾಯದಿಂದ ಬರವಣಿಗೆಯತ್ತ ಮುಖ ಮಾಡಿ ಒಂದು ವರ್ಷ ಪೂರೈಸುವುದರೊಳಗೇ ನೀನೇ ನನ್ನ ಬಾಳ ಸಂಗಾತಿಯಾಗಿ ಬರುವೆ ಎಂಬುದು ಕನಸಿನಲ್ಲಿಯೂ ಅನಿಸಿರಲಿಲ್ಲ... ಅತ್ಯಂತ ಆತ್ಮೀಯ ಸ್ನೇಹಿತರಾಗಿ ಎರಡೂವರೆ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ನಮ್ಮ ಸ್ನೇಹದ ಬಗ್ಗೆ ನಾನು ಈಗಾಗಲೇ ಬರೆದಾಗಿದೆ ಮತ್ತು ಅದನ್ನು ನನ್ನ ಓದುಗರೆಲ್ಲರೂ ಓದಿಯೂ ಇದ್ದಾರೆ. ಆದರೆ ಆ ಲೇಖನದ 'ಆತ್ಮ' ನೀನೆ ಎಂದು ತಿಳಿದಿದ್ದದ್ದು ನಮ್ಮಿಬ್ಬರಿಗೆ ಮಾತ್ರ...! ಅದೆಷ್ಟು ಜನ ಓದಿ ಪ್ರಶ್ನೆ ಮಾಡಿದ್ದರೋ ಯಾರ ಬಗ್ಗೆ ಬರೆದಿದ್ದೀಯ ಎಂದು..... ಅಂತಹ ಸ್ನೇಹ ಇಂದು ನಮ್ಮ ಸಹಜೀವನಕ್ಕೆ ಬುನಾದಿಯಾಗುತ್ತದೆ ಎಂದು ಮಾತ್ರ ಇಬ್ಬರೂ ತಿಳಿದಿರಲಿಲ್ಲ ಅಲ್ಲವೇ...?! ಹುಡುಗ ಹುಡುಗಿಯ ನಡುವೆ ಬರಿದೇ ಸ್ನೇಹ ಸಾಧ್ಯವಿದೆ ಎಂಬುದನ್ನು ಸಾಧಿಸ ಹೊರಟಿದ್ದೇನೋ ನಿಜ... ಆದರೆ ನಮ್ಮ ಕಥೆಯೂ ಒಂದೇ ತರಹದ ಕೊನೆ ತಲುಪಿತಲ್ಲ ಎಂಬ ಬೇಸರವಂತೂ ಖಂಡಿತಾ ಇಲ್ಲಾ...  ನಮ್ಮ ಸ್ನೇಹವನ್ನು ಬಲ್ಲ ಅದೆಷ್ಟು ಜನ ನೀವಿಬ್ಬರೇ ಯಾಕೇ ಮದುವೆಯಾಗಬಾರದು ಎಂದು ನನ್ನ ಬಳಿ ಹೇಳಿದ್ದಾರೆ ಗೊತ್ತಾ..!! ಆಗ ನಂಗೆ ಆಶ್ಚರ್ಯ ಆಗೋದು, ಇದೇನು ಎಲ್ಲರೂ ಹೀಗಂತಾರಲ್ಲ ಅಂತ.... ಇಂತಹ ಒಳ್ಳೆಯ ಸ್ನೇಹಿತನನ್ನೇ ನನ್ನ ಬಾಳ ಸಂಗಾತಿಯಾಗಿ ಕರುಣಿಸಿದ ದೇವರಿಗೆ ನನ್ನ ಕೋಟಿ ಕೋಟಿ ನಮನಗಳು... 
       ನಿನ್ನ ಸ್ನೇಹವನ್ನು ಬಯಸಿ ಬಂದವಳು ನಾನು.... ನಿನ್ನ ನಾಚಿಕೆಯ ಸ್ವಭಾವವೇ ನನಗೆ ಮೊದಲಿಂದಲೂ ಇಷ್ಟವಾಗಿದ್ದು... ಅದಕ್ಕಾಗೆ ಮೊದಲಿಂದಲೂ ನಾನು ನಿನ್ನನ್ನು ಕುಕ್ಕಿ ಕುಕ್ಕಿ ಮಾತಾಡಿಸುತ್ತಿದ್ದೆ.. ವರ್ಷಗಟ್ಟಲೆ ಪ್ರಯತ್ನ ಪಟ್ಟ ಮೇಲೆ ಅಂತೂ ಸರಾಗವಾಗಿ ಮಾತಾಡಲು ಶುರು ಮಾಡಿದೆ ನೀನು... ನಿಜವಾಗಿಯೂ ನಿನ್ನೊಡನೆ ಸವಿದ ಸ್ನೇಹದ ಸವಿ ನನಗೆಲ್ಲೂ ಸಿಕ್ಕಿಲ್ಲ... ನೀನು ಮಾತಾಡದಿದ್ದರೂ ನಿನ್ನಲ್ಲಿ ಅಗಾಧ ಸ್ನೇಹವನ್ನು ಕಂಡಿದ್ದೆ.... ಈಗ ಅದೇ ಮೌನದಲ್ಲಿ ಅಷ್ಟೇ ಪ್ರೀತಿಯನ್ನು ಕಾಣುತ್ತಿದ್ದೇನೆ... ಅದೆಷ್ಟು ಒಬ್ಬರಿಗೊಬ್ಬರು ಅನಿವಾರ್ಯವಾಗಿದ್ದೆವೆಂದರೆ ನನ್ನ ಮದುವೆಯಾದರೆ ನಾವಿಬ್ಬರೂ ಈ ಸ್ನೇಹದಿಂದ ಹೇಗೆ ದೂರಾಗುವುದು ಎಂದು ದುಃಖ ಪಡುವಷ್ಟರ ಮಟ್ಟಿಗೆ...! ಈಗ ಅದಾವ ತೊಂದರೆಯೂ ಇಲ್ಲದೆ ಇಬ್ಬರೂ ಪೂರ್ತಿ ಜೀವನದ ಸವಿಯನ್ನು ಒಟ್ಟಿಗೆ ಸವಿಯುವತ್ತ ಹೆಜ್ಜೆ ಇಡಲು ಕಾತರಿಸುತ್ತಿದ್ದೇವೆ.... 
       ಯಾವ ಕ್ಷಣದಲ್ಲಿ ನಮ್ಮ ಭಾವನೆಗಳು ತಿರುಗಿದವೋ...! ತಿಳಿಯಲಿಲ್ಲ.... 'ಮನೆಯಲ್ಲಿ ಒಪ್ಪಿದರೆ ಮಾತ್ರ' ಎಂಬ ನಿರ್ಧಾರಕ್ಕೆ ಬಂದಾಗಲಂತೂ ಒಂದು ಕ್ಷಣ ಕಳೆಯುವುದೂ ಕಷ್ಟವಾಗಿತ್ತು. ಒಮ್ಮೆ ಬಿಟ್ಟು ಬದುಕಬಹುದು ದೊಡ್ಡದಲ್ಲ ಎನಿಸಿದರೂ.... ಕ್ಷಣ ಮಾತ್ರದಲ್ಲಿ ಹೇಗೆ ಎಂಬ ಪ್ರಶ್ನೆ ಧುತ್ತನೆ ನಿಲ್ಲುತ್ತಿತ್ತು....!! ಅಂತೂ ಅತ್ತೆ, ಮಾವ, ಅಪ್ಪ, ಅಮ್ಮ ಪ್ರೀತಿಯಿಂದ ಮದುವೆ ಮಾಡಲು ಒಪ್ಪಿದಾಗ ನಿಜವೇ ಇದು ಎಂದು ನಂಬಲು ನನಗಂತೂ ಬಹಳ ದಿನಗಳೇ ಹಿಡಿಯಿತು....

       ನಿನ್ನ ನಾಚಿಕೆ, ಸಂಕೋಚದ ಸ್ವಭಾವ ನನಗೆ ತುಂಬಾ ಇಷ್ಟ.... (ಒಬ್ಬರಿಗಾದರೂ ಇದೆಯಲ್ಲ ಸಾಕು ಬಿಡು ಎಂಬುದು ನನ್ನ ಸ್ನೇಹಿತರ ಅಂಬೋಣ...!) ವಸ್ತು ಸ್ಥಿತಿಯನ್ನು ಮುಚ್ಚಿಡದೆ ಇದ್ದ ಹಾಗೇ ಹೇಳಿ ಬಿಡುವ ನಿನ್ನ ಗುಣ ಇಷ್ಟ.... ನಿನ್ನ ನಗು ಇಷ್ಟ... ನಿನ್ನ voice ಅಂತೂ ಸೂಪರ್ ಇಷ್ಟ... ಎಲ್ಲಾ ಗೊತ್ತಿದ್ದೂ ಏನೂ ಗೊತ್ತಿಲ್ಲದೇ ಇರುವಂತೆ ಒಂಥರಾ decency ಯನ್ನು ಉಳಿಸಿಕೊಳ್ಳುತ್ತೀಯಲ್ಲ ಅದು ಮಾತ್ರ ಎಲ್ಲರಿಂದ ಸಾಧ್ಯವಿಲ್ಲ...! ಅದಕ್ಕೇ ನಾನು ಕ್ಲೀನ್ ಬೋಲ್ಡ್ ಆಗಿದ್ದು.... ಅದೆಷ್ಟು ಜನ ನಿನ್ನನ್ನು ಹೊಗಳುತ್ತಾರಲ್ಲ ಆಗ ಆಗುವ ಸಂತೋಷ ಕೈಗೆ ನಿಲುಕದ್ದು.... ನನ್ನ ಭಾವನೆಯ ಮಿಡಿತ ಸ್ವಲ್ಪ ವ್ಯತ್ಯಾಸವಾದರೂ ಬಾಯಿ ಬಿಡಿಸಿ ತಿಳಿದುಕೊಂಡು ನಿನ್ನ ತುಡಿತವನ್ನು ಮಾತ್ರ ನಿನ್ನ ಮೌನದಲ್ಲೇ ನಾನು ತಿಳಿದುಕೊಳ್ಳಲೆಂಬ ಹಂಬಲ ನಿನ್ನದು... ನಿನ್ನ ಮುಂದೆ ಮಾತ್ರವೇ ನನ್ನ ಸಿಟ್ಟು ಕೊಂಚ ಕೂಡ ನಿಲ್ಲದೆ ಕರಗಿ ಹೋಗುವುದು.... ನಿನ್ನನ್ನು ನನಗೆ ಕೊಟ್ಟ ದೇವರಿಗೆ ಮತ್ತೊಮ್ಮೆ ನನ್ನ ಕೋಟಿ ಕೋಟಿ ನಮನಗಳು.....


        ನನ್ನ ಪ್ರೀತಿಯನ್ನೆಲ್ಲ ನಿನಗೆ ಧಾರೆ ಎರೆಯಬೇಕೆಂಬ ಹಂಬಲವಿದೆ..... ಕಣ್ತುಂಬಾ ನಮ್ಮ ಮುಂದಿನ ಬದುಕಿನ ಕನಸಿದೆ.... ಕೊನೆವರೆಗಿನ ಸಹಬಾಳ್ವೆಯ ವಿಶ್ವಾಸವಿದೆ... ನನ್ನನ್ನು ಜತನದಿಂದ ಕಾಪಾಡುವೆಯೆಂಬ ನಂಬಿಕೆಯಿದೆ... ಬೊಗಸೆ ತುಂಬಾ ಪ್ರೀತಿಯಿದೆ... ಮನ ತುಂಬಾ ಮಮತೆಯಿದೆ.... ಒಟ್ಟಾರೆ ಕಾಯುವಿಕೆಯಲ್ಲೂ ಏನೋ ಸುಖವಿದೆ... 


ವಿವಾಹ ಯೋಗದ
ನಾದ ನುಡಿಸಿ
ಜುರ್ವೇದ ಘೋಷದೊಳು
ರಿಮಣಿ ಕುಂಕುಮ ಸೌಭಾಗ್ಯವ ದೊರಕಿಸಲಿರುವ 
                                ನಿನಗಿದು ಅರ್ಪಣೆ........



ಕಾವ್ಯಾ :) :) 

Tuesday, November 29, 2011

ಹಿಂಗೆ ಇರ್ಲಿ ಹೇಳಿ....

     ನಮ್ಮ ಹವಿಗನ್ನಡ ಹೇಳದು ಭಾರಿ ಅದ್ಭುತ ಭಾಷೆ. ನಮ್ಮ ಎದ್ರಿಗಿದ್ದವ್ಕೆ (ಹವ್ಯಕೇತರರು) ಗೊತ್ತಾಪ್ಪಲ್ಲಾಗ ನಮ್ಮ ಸಂಭಾಷಣೆ ಅಂದ್ರೆ ಅಪ್ಪಟ ಹವಿಗನ್ನಡನ ಅದ್ಭುತವಾಗಿ ಫಾಸ್ಟ್ ಆಗಿ ಮಾತಾಡಿಬುಟ್ರೆ ಎದ್ರಿನವ್ಕೆ ಅಂತ-ಪಾರು ಹರಿತಿಲ್ಲೆ... ಅದ್ಕೆ ಆನು ಈ ಭಾಷೆ ಒಂದು best ಭಾಷೆ ಹೇಳಿ consider ಮಾಡಿಗಿದಿ. ನಿಂಗ ಏನಂಬೀssss....

ನಮ್ಮ ಹವಿಗನ್ನಡದಲ್ಲೇ ಸುಮಾರ್ ನಮ್ನಿ ಇದ್ದು. ಊರಿಗೆ ತಕ್ಕಾಂಗೆ ಭಾಷೆ ಸ್ವಲ್ಪ ವ್ಯತ್ಯಾಸ ಇರ್ತು. ಸಿದ್ದಾಪುರ, ಸಿರ್ಸಿ, ಸಾಗರ, ಗಂಟಲ ಕೆಳಗೆ (ಗಟ್ಟದ ಕೆಳಗನವ್ವು!) ಎಲ್ಲಾ ಬದಿಗೂ ಒಂದೇ ಭಾಷೆ ಅದರುವ ಮಾತಡ ಲಯ, ಶಬ್ದ ಪ್ರಯೋಗಗಳಲ್ಲಿ ಸ್ವಲ್ಪ ಬೇರೆ ನಮ್ನಿ ಇರ್ತು.  
ಉದಾ: ಸಿದ್ದಾಪುರ - ಹೋಯ್ದಿಲ್ಲೆ
          ಸಿರ್ಸಿ      - ಹೋಜಿಲ್ಲೆ
          ಸಾಗರ    - ಹೋಗಲ್ಲೆ 
 ಇನ್ನು ಉಪ್ಪು ನೀರ್ ಜನ (ಸೌತ್ ಕೆನರಾ ಮಂದಿ) ಅವರದ್ದು ಮತೊನಮ್ನಿ ಭಾಷೆ.. ಭಾಳ ಮಜಾ ಇರ್ತು ಕೇಳಲೆ... ಒಂದು ಚಂದ ಕೂಸು ಬಂದ್ರೆ ಅದರ ಹತ್ರ  'ಈಗ ಬಂದ್ರ, ಆಸರಿಗೆ ಬೇಕಾ' ಕೇಳಿ... 'ಅಪ್ಪು ಈಗ ಬಂದದ್ದು' ಅಂಬು... ಅದ್ನ ಕೇಳಿದ್ದೆ ನಮ್ ಬದಿ ಹುಡ್ರು ಚಂದಿದ್ದು ಇದೇ ಸಂದರ್ಭ ಹೇಳಿ ಅಪ್ಪಾಕ್ಯಬುಟ್ರೆ ಮುಗ್ತು ಕೆಲಸ....! ಅಪ್ಪು ಅಂದ್ರೆ ಹೌದು ಹೇಳಿ ಅವ್ರ ಭಾಷೇಲಿ.... 
ಅದೆಲ್ಲ ಇರ್ಲಿ ಒಂದ್ ಬದಿಗೆ... ನಮ್ ಬದಿಗೆ ಹವ್ಯಕರು ಮಾತಾಡ್ತಾ ಕುಂತ್ರೆ ಅದ್ನ ಸುಮ್ನೆ ಕೇಳ್ತಾ ಇಪ್ಪವ್ಕೆ ಒಳ್ಳೆ ಮಜಾ ಬತ್ತು. ಅಂಥ ಸಂಭಾಷಣೆಯ ಒಂದಷ್ಟು ತುಣುಕನ್ನ ಇಲ್ಲಿ ಕೊಡ್ತಿ...
ಮೊದಲಿಗೆ ನಮ್ ಬದಿಗೆ ಎಂತಾರು ಸಮಾರಾಧನೆ, ಶ್ರಾದ್ಧ ಎಂತದೆ ಆದ್ರುವಾ  ಖಾಯಂ ಇರ್ತಲಿ ಮಂಡಲ (ಹವ್ಯಕರ ಸಾಧನೆಯ (!) ಇಸ್ಪೀಟಿನ ಮಂಡಲ) ಅದ್ರ related discussion  ಬದಿಗೆ ನೋಡನ.... 
೧) ಅತ್ಗೆ: (ಇಸ್ಪೀಟ್ ಆಡ್ತಾ ಕುತಗಂಡ ಒಂದು ಭಾವನತ್ರೆ) ಅರೇsss ಭಾವಾsss ... 'ಎನ್ನತ್ರೆ' ಮನಕ್ಯತ್ತಿ ಹೇಳಿಕ್ಕೆ ಇನ್ನೂ ಆಡ್ತಾ ಇದ್ಯಲಾ...(!!) ನಿನ್ ನಮ್ಬ್ಕ್ಯ ಕುಂತ್ರೆ ಅಪ್ಪದಲ್ಲ ಹೋಪದಲ್ಲ ಮಾರಾಯ್ನೆ........ 

೨) ಭಾವ: (ರಾತ್ರೆ ೧೧ ಗಂಟೆ ಆದರು ಮಲ್ಗ ಸುದ್ದಿಲ್ದೆ ಕುಣಕೋತ ಗಲಾಟೆ ಮಾಡ್ತಾ ಇದ್ದ ಶಣ್ ಹುಡ್ರತ್ರ) ಅಯ್ಯ ಹುಡ್ರಾ... ಎಂತ ಗೌಜಿ ಮಾಡ್ತ್ರಾ ಬೆಳಗಾಗಿ ಯೋಳ್ತ್ರಿಲ್ಲೇ ಮನ್ಕ್ಯಳಿ ನೆಡಿರಿ ಸಾಕು ನಿಂಗಳ ಕುಣತ....
ಅಲ್ಲೇ ಇದ್ದ ಅತ್ಗೆ: ಅಯ್ಯಾ ಭಾವಾsss...'ಆನು ನೀನು' ಮನಕ್ಯನ್ಡ್ರೆಯಾ ಆ ಸುಟ್ ಹುಡ್ರೆಲ್ಲಿ ಇಷ್ಟ್ ಲಗು ಮನ್ಕ್ಯತ್ವಾ,...!!

೩) (ಬರೇ ಬುಕ್ ಹೊಡಿತಾವ ಮಕ ಜೋತು ಬಿಟ್ಗ ಕುಂತ ಭಾವನತ್ರೆ)  
ಅತ್ಗೆ: ಆಡಲೆ ಕುಂತಿದ್ದೆ ಒಂದರ ಹಿಂದೆ ಒಂದ ಆಟ ತೋರ್ಸ್ತಿ ಹೇಳದವ ಬರೀ ಫುಲ್ ಹೊಡಿತ ಬಿಜ್ಯಲ ಭಾವ...
ಭಾವ: ಥೋ ಮಾರಾಯ್ತಿ ಇವತ್ಯಾಕೋ ಭಾರಿ ಸೋಲ್ ಗೈ ಇದ್ದಕೆ ಸಾಯ್ಲಿ... ಆಟ ಬಿಟ್ಟು ಮನ್ಕ್ಯಂಬದೇ ಒಳ್ಳೆದೆನ ಕಾಣ್ತು.. ಎಳದಾಂಗು ಬರೀ ಬ್ಯಾಡದ್ದೆ  ಬತ್ತು... ಒಂದ್ ಜೋಕರ್ ಜಗ್ಗತಿಲ್ಲೇ... 

  ೪) ಒಂದು ಮದ್ವೆ ಮನೇಲಿ ಹೆಂಗಸರ ಪಂಗಡ ಒಂದು ಹಿಂದಿನ ದಿನ ಎಲ್ಲಾ ಕೆಲಸ ಮುಗ್ಸಿ ನಾಳಿಗೆ ಬೇಕಪ್ಪಂತದ್ದೆಲ್ಲ ಮಾಡಿಟ್ಟಿಕ್ಕೆ ಸ್ವಲ್ಪ ಹೊತ್ತಾರು ಹನಿ ಕಣ್ ಮುಚ್ಚನ ಹೇಳಿ ಎಲ್ಲಿ ವರ್ಗಲೆ ಜಾಗಿದ್ದು ನೋಡ್ತಾ ಹೊಂಟ ಹೇಳಾತು... ನೋಡ್ರೆ ಇಡೀ ಮನೆ ತುಂಬಾ ಎಲ್ಲಿ ನೋಡಿರು ಎಲ್ಲಾ ಮಲ್ಗಿಗಿದ... ಒಂದ್ ಗಳಿಗಾರು ನಿದ್ದೆ ತೆಕ್ಕಮ್ಮನ ನೋಡಿರೆ ಆಗ್ತಿಲ್ಯಲಿ ಹೇಳ ಬೇಜಾರಲ್ಲಿ...
ಅತ್ಗೆ ೧ : ಮಾಳಗೆ ಎಲ್ಲಾ ತುಂಬೋಜೆ.. ಎಲ್ಲೂ ಜಾಗಿಲ್ಲೇ...
ಅತ್ಗೆ ೨: ಥೋ ಜಗಲೀಲು ಜಾಗಿಲ್ಯೇ.. ಈ ಸುಟ್ ಗಂಡಸರೆಲ್ಲ ಇಲ್ಲೇ ಬಿದ್ಕಂಜ... 
ಅತ್ಗೆ ೩: ಅಂಗಳದಲ್ಲಾದ್ರು ಒಂದ್ ಗಳಿಗೆ ಅಡ್ದಾಪ್ಪನ ಅಂದ್ರೆ ಮಂಟಪ ಮಾಡವು, ಹುಡ್ರು ಎಲ್ಲಾ ಮನ್ಕ್ಯಂಡಿಗಿದ್ವಲೇ... ಎಲ್ಲೂ ಜಾಗಿಲ್ಲೇ ವಟ್ಟುವ ನಾಳೆ ನಮ್ ಮುಖ ನೋಡಂಗೆ ಇರ್ತಿಲ್ಲೆ ನಿದ್ದೆಗೆಟ್ಟು... 
ಅತ್ಗೆ ೧: ಯೇ ಅಡ್ಗೆ ಚಪ್ಪರದ ಬದಿಗೆ ಜಾಗಿದ್ದಿಕ್ಕು ನೋಡನ ಬನ್ನಿ... 
(ಅತ್ಗೇರ ದಂಡು ಅಲ್ಲಿ ಹೋಗಿ ನೋಡಿ...)
ಅತ್ಗೆ ೨: ಅಯ್ಯ ಇಲ್ಲೂ ಮನಕ್ಯಂಬ ಆಟ ಇಲ್ಯಲೇ.. ಎಲ್ಲಾ ಅಡ್ಗೆ ಭಟ್ಟಕ್ಕ ಮನ್ಕ್ಯಂಡಿಗಿದ... 
ಇನ್ನೂ ನಿದ್ದೆ ಬರದೆ ಹೊಳ್ಳತಾ ಇದ್ದ ಒಂದ್ ಕಳ್ಳ ಅಡ್ಗೆ ಭಟ್ಟ : ಮನಕ್ಯಂಬ ಆಟ ಇದ್ರೆ ಬನ್ನಿ ಬೇಗ್ನೆಯ.. ಬೆಳಗಾಗ್ತ ಬಂತು ಹೆಚ್ಚೊತ್ತಿಲ್ಲೇ...!!!!

೫) ಮದ್ವೆ ಮನೇಲಿ ಒಂದ್ ಅತ್ಗೆ "ತಡ್ಯೇ ಅಕ್ಕಯ್ಯ, ಸೀರೆ ಬಿಚಾಕಿಕ್ಕೆ ಬತ್ತಿ.. ಶೆಕೆ ಉರಿ...ದೊಡ್ಡ ಸೀರೆ ಸಾಯ್ಲಿ" 
ಅತ್ಗೆ ಒಳಗೇ ಹೋಗಿದ್ದೇ ಹೊರ ಬದಿಗೆ ಒಂದ್ ಮಾಣಿ ಕಾಯ್ತಾ ಕುಂತ ಈಗ ಸೀರೆ ಬಿಚಾಕಿಕ್ಕೆ ಬತ್ತು ಹೇಳಿ... ಪಾಪ ಅವನ್ಗೆಂತ ಗೊತಿದ್ದು ನಮ್ ಹೆಂಗಸರಿಗೆ ಬ್ಯಾರೆ ಸೀರೆ ಉಟ್ಗ ಬತ್ತಿ ಇದ್ನ ಬಿಚ್ಚಿಕ್ಕೆ ಹೇಳ ಅಭ್ಯಾಸ ಇಲ್ಲೇ ಹೇಳದು....!! 
೬) ಅಕ್ಕಯ್ಯ ೧: ಅಯ್ಯsss ಅಕ್ಕಯ್ಯ ನಿನ್ ಮನೆದು ಎಂತ ಹಿಂಗ್ ಅಗೊಜೆ.. ಪೂರ್ತಿ ಹಾಳಾಗೋಯ್ದಲೇ... ಯಂದು ಭಾರಿ ಚೊಲೋ ಆಯ್ದು... ಬುಡ ದಪ್ಪಗಾಗಿ ಎದಿದ್ದು... ಯಮ್ಮಲ್ಲಿ ಇವ್ಕಂತು ಭಾರಿ ಕುಶಿ ಅದ್ಕೆಯ.. (!!) ಇವ್ಕೆ ಹೂಗಿನ ಗಿಡ ಅಂದ್ರೆ ಭಾರಿ ಪ್ರೀತಿನಲೇ...  ನಿಮ್ಮಲ್ಲಿ ಸತ್ತೋಪ್ಲೆ ಆಗೋಯ್ದಲೇ.. ನಾ ಇಲ್ಲಿಂದನೇ  ತಗ ಹೋಗಿ ನೆಟ್ಟಿದ್ದು ಚೊಲೋ ಆಯ್ದು.. ನೀ ಬಾ ಮತೊಂದ್ ಬುಡ ತಂದ್ಕಳಕ್ಕು ಯಮ್ಮನಿಂದವ....

      ಹಿಂಗೆ ನಮ್ಮ ಹವ್ಯಕರ ಸಂಭಾಷಣೆ ಸಮ ಲಕ್ಷ ಕೊಟ್ಟು ಕೇಳ್ತಾ ಇದ್ರೆ ಹಾಸ್ಯಮಯ ಆಗಿರ್ತು... ನಮ್ ಅಜ್ಜ-ಅಜ್ಜಿದಿಕ್ಕ ಮಾತಾಡ ನಮ್ನಿ ಅಪ್ಪಟ ಹವಿಗನ್ನಡ ಈಗ ಮಾಯ ಆಗ್ತಾ ಇದ್ದು... ಎಲ್ಲರಿಗು ಆ ಹಳೆ ಶಬ್ದಗಳು ಹೊಸ ಕನ್ನಡದ ಸಂತಿಗೆ ಸೇರಿ ಹೋಗ್ತ ಇದ್ದು... ಒಟ್ನಲ್ಲಿ ಹವಿಗನ್ನಡ ಆಧುನಿಕೀಕರಣ ಆಗ್ತಾ ಇದ್ದು......



ಕಾವ್ಯಾ 

Tuesday, October 18, 2011

(ಮೇ ತಿಂಗಳಿನಲ್ಲಿ ಮಹಾಬಲಗಿರಿ ಭಟ್ಟರ ಕರಾವಳಿ ರೈಲು ಬ್ಲಾಗಿನಲ್ಲಿ (http://karavalirail.blogspot.com) ಈ ಚಿತ್ರಕ್ಕೆ ಹಲವಾರು ಕವನಗಳು ಬಂದವು... ಮೂಲ ಚಿತ್ರ ಕವಿ ಹೃದಯಿ ಪ್ರವೀಣ್ ಭಟ್ ಸಂಪ (http://nenapinasalu.blogspot.com )ಅವರದ್ದು. ಈ ಚಿತ್ರಕ್ಕೆ ನನ್ನದೊಂದು ಕವನ....)






ಒಂಟಿಯಾಗಿ ಕುಳಿತ ಆ ಮುದಿಯ ಜೀವ....
ಬಾಯ್ದೆರೆದು ನೋಡುತಿದೆ ಬಿಸಿಲ ಕಾವ...
ಪ್ರಾಯದಲ್ಲಿರಲಿಲ್ಲ ಇಷ್ಟು ಬಿಸಿಲು ಎಂಬ ಭಾವ....

ಅರಿಯದ ವಯಸಿಗೆ ಮದುವೆ-ಮಕ್ಕಳ ಜಂಜಾಟ...
ಎನಿತು ಸುಖವ ಕಂಡಿತು ಈ ಜೀವ ಪ್ರಾಯದಲಿ...
ಸಂಸಾರ ತೂಗಿಸುವ ಯೋಚನೆಯೊಂದೇ ತಲೆಯಲಿ...

ದುಡಿದು ಬಂದರೆ ಹಸಿವೆಂದು ಬಾಯ್ಬಿಡುವ ಮಕ್ಕಳು...
ಕಾಯಿಸಿದ ಒಂದಿಷ್ಟು ಅಂಬಲಿಯ, ಒಡಲ ಹಸಿವಿಲ್ಲದೆ ಬಡಿಸಿದ ಕೈಗಳು...
ಪತಿಯ ಊಟವ ಖುಷಿಯಲಿ ಕಂಡು, ನೀರು ಕುಡಿದು ನಿದ್ರಿಸಿದ್ದ ಕಂಗಳು....

ಕಷ್ಟ ಪಡುತ್ತ ಮಕ್ಕಳನು ದಡ ಹತ್ತಿಸುವ ಹಾದಿಯಲಿ...
ಪತಿಯ ಅಗಲಿಕೆಯ ನೋವನು ಮರೆಯುತ....
ಮಕ್ಕಳೊದಗಿಸುವ ಮುಂದಿನ ನೆಮ್ಮದಿಯ ಹಾದಿಯತ್ತ ದೃಷ್ಟಿ ಹರಿಸುತ....

ಕಂಡ ಕನಸುಗಳು ನನಸಾಗದಾದಾಗ...
ಮಕ್ಕಳು ಮುದಿ ಜೀವವ ತೊರೆದು ಹೋದಾಗ....
ನಮಗೆ ನಾವೇ... ಗೋಡೆಗೆ ಮಣ್ಣೇ ಎಂಬ ಭಾವದಿ....

ಬೊಚ್ಚು ಬಾಯಿ, ಗುಳಿ ಬಿದ್ದ ಕಂಗಳಿಂದ....
'ನಾ ಬೆಳೆಸಿದ ಹುಡುಗ ನೀನಾದರೂ
       ನನ್ನ ನೋಡಾಕೆ ಬಂದೆಯಾ ಮಗಾ...'
ಎಂಬ ಸಂತಸವ ಮುಖದಲಿ ಹೊತ್ತ ನಾಗಿ.....
ಇವಳು ನನ್ನ ಬೆಳವಣಿಗೆಯಲ್ಲಿ ಭಾಗಿ....


ಕಾವ್ಯಾ :)