Tuesday, January 20, 2015

ಆ ದಿನ :

      ಅವರಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಒಂದು ದಿನವೂ ಇರುತ್ತಿರಲಿಲ್ಲ. ಏನೇ ಮಾಡಿದರೂ ಒಟ್ಟಿಗೆ ಆಗಬೇಕು. ಅವರ ಮಧ್ಯೆ ಪ್ರೀತಿ ಎಂಬುದರ ಅರಿವೇ ಇಲ್ಲದ ಒಡನಾಟ. ಅದೊಂದು ದಿನ ಅವಳಿಗೆ ಹುಡುಗ ನೋಡಲು ಬರುವುದಾಗಿ ತಿಳಿಸಿದರು. ಅವಳು ಬೇಸರದಿಂದಲೇ ಅವನಿಗೆ ಹೇಳಿದ್ದಳು. ಅವನು, ತನ್ನನ್ನು ಯಾವುದೊ ಹುಡುಗಿ ನೋಡಲು ಒತ್ತಾಯ ಮಾಡುತ್ತಿದ್ದಾರೆ ಅಮ್ಮ ಎಂದು ಹೇಳಿದ್ದ. ಇಬ್ಬರೂ ಇಷ್ಟವಿರದ ಕಾರಣ ಯಾರು ನೋಡಲು ಬರುವವರು ಯಾರೆಂದೂ ಕೇಳಿರಲಿಲ್ಲ..

     'ಆ ದಿನ' ಅನ್ಯಮಸ್ಕರಾಗಿಯೇ ತಲೆಯೆತ್ತಿ ನೋಡಿದರೆ.... ಇಬ್ಬರ ಕಣ್ಣಲ್ಲೂ ಆನಂದ ಭಾಷ್ಪ... ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕಾಣದ ದೇವರಿಗೆ ಮನದಲ್ಲೇ ವಂದಿಸುತ್ತಿದ್ದಾರೆ....

************
ವಿಧಿ ವರ : 

    ಗಾಢ ಸ್ನೇಹದ ಮಧ್ಯೆ ಅರಿವಿಲ್ಲದೇ ಪ್ರೀತಿ ಇಣುಕಿತ್ತು... ಇಬ್ಬರ ಮನಸ್ಸೂ ಹೇಳಲಾರದ ಅನಿವಾರ್ಯತೆಯಿಂದ ತಳಮಳಿಸಿತ್ತು... ಅದೊಂದು ದಿನ ತಡೆಯಲಾರದ ದುಃಖ ಪ್ರೀತಿಯನ್ನು ಇಬ್ಬರಿಂದಲೂ ಏಕಕಾಲಕ್ಕೆ ಹೊರಹಾಕಿತ್ತು... ಆಗದ ಮಾತೆಂದು ತಿಳಿದ ಇಬ್ಬರಲ್ಲೂ ದುಃಖ ಭೋರ್ಗರೆದು, ಅಸಹಾಯಕತೆ ಕಣ್ಣೀರ ಕೋಡಿಯಾಗಿ ಹರಿದಿತ್ತು. ಒಬ್ಬರಿಗೊಬ್ಬರು ಸಮಾಧಾನ ಮಾಡಿಕೊಂಡು ಮತ್ತದೇ ಹಳೆಯ ನಗು ಮೊಗದ ಮುಖವಾಡ ಹೊತ್ತರು... ಮೊದಲಿನಿಂದಲೂ ವಿಧಿಯ ಕರಾಳ ಮುಖದ ಅರಿವಿದ್ದಿದ್ದರಿಂದ ದಿನೇ ದಿನೇ ತಮ್ಮ ಮುಖವಾಡಕ್ಕೆ ಹೊಂದಿಕೊಂಡುಬಿಟ್ಟರು..
     ಈ ಬಾರಿ ವಿಧಿ ಕೂಡ ಅವರ ಪ್ರೀತಿಗೆ ತಲೆ ಬಾಗಿತ್ತು... ಧಿಡೀರನೆ ಮನೆಯಿಂದ "ನಿಮ್ಮಿಬ್ಬರ ಜಾತಕಗಳು ಹೊಂದುತ್ತವೆ ನಮಗೆ ಒಪ್ಪಿಗೆ... ನೀವೇನೆನ್ನುತ್ತೀರಿ..." ಎಂದು ಫೋನಾಯಿಸಿದಾಗ  ಅದಕ್ಕೆ ಉತ್ತರವನ್ನೂ ಹೇಳದೆ ಓಡಿ ಬಂದ ಅವನು ಅವಳ ಮುಂದೆ ನಿಂತು, ಪ್ರೀತಿಯಿಂದ ತಂದ ಗುಲಾಬಿಯನ್ನು ಅವಳ ಕೈಗಿಟ್ಟು ಹಣೆಗೊಂದು ಹೂಮುತ್ತನ್ನಿತ್ತಿದ್ದ.... 

(ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಹನಿಗಥೆಗಳು)

ಕಾವ್ಯಾ :) 

Monday, December 15, 2014

ಹನಿಗಥೆಗಳು........


ವಿಧಿ ವರ :     
 ಗಾಢ ಸ್ನೇಹದ ಮಧ್ಯೆ ಅರಿವಿಲ್ಲದೇ ಪ್ರೀತಿ ಇಣುಕಿತ್ತು... ಇಬ್ಬರ ಮನಸ್ಸೂ ಹೇಳಲಾರದ ಅನಿವಾರ್ಯತೆಯಿಂದ ತಳಮಳಿಸಿತ್ತು... ಅದೊಂದು ದಿನ ತಡೆಯಲಾರದ ದುಃಖ ಪ್ರೀತಿಯನ್ನು ಇಬ್ಬರಿಂದಲೂ ಏಕಕಾಲಕ್ಕೆ ಹೊರಹಾಕಿತ್ತು... ಆಗದ ಮಾತೆಂದು ತಿಳಿದ ಇಬ್ಬರಲ್ಲೂ ದುಃಖ ಭೋರ್ಗರೆದು, ಅಸಹಾಯಕತೆ ಕಣ್ಣೀರ ಕೋಡಿಯಾಗಿ ಹರಿದಿತ್ತು. ಒಬ್ಬರಿಗೊಬ್ಬರು ಸಮಾಧಾನ ಮಾಡಿಕೊಂಡು ಮತ್ತದೇ ಹಳೆಯ ನಗು ಮೊಗದ ಮುಖವಾಡ ಹೊತ್ತರು... ಮೊದಲಿನಿಂದಲೂ ವಿಧಿಯ ಕರಾಳ ಮುಖದ ಅರಿವಿದ್ದಿದ್ದರಿಂದ ದಿನೇ ದಿನೇ ತಮ್ಮ ಮುಖವಾಡಕ್ಕೆ ಹೊಂದಿಕೊಂಡುಬಿಟ್ಟರು..
     ಈ ಬಾರಿ ವಿಧಿ ಕೂಡ ಅವರ ಪ್ರೀತಿಗೆ ತಲೆ ಬಾಗಿತ್ತು... ಧಿಡೀರನೆ ಮನೆಯಿಂದ "ನಿಮ್ಮಿಬ್ಬರ ಜಾತಕಗಳು ಹೊಂದುತ್ತವೆ ನಮಗೆ ಒಪ್ಪಿಗೆ... ನೀವೇನೆನ್ನುತ್ತೀರಿ..." ಎಂದು ಫೋನಾಯಿಸಿದಾಗ  ಅದಕ್ಕೇ ಉತ್ತರವನ್ನೂ ಹೇಳದೆ ಓಡಿ ಬಂದ ಅವನು ಅವಳ ಮುಂದೆ ನಿಂತು, ಪ್ರೀತಿಯಿಂದ ತಂದ ಗುಲಾಬಿಯನ್ನು ಅವಳ ಕೈಗಿಟ್ಟು ಹಣೆಗೊಂದು ಹೂಮುತ್ತನ್ನಿತ್ತಿದ್ದ.... 

*************

ಕಣ್ಣೀರು :
              ಅವನು ತಂದೆ ತಾಯಿಯನ್ನು ಕಡೆಗಣಿಸಿ ತನ್ನ ಹೆಂಡತಿ, ಮಗನೊಡನೆ ಐಷಾರಾಮಿಯಾಗಿ ಬೇರೆಡೆ ವಾಸಿಸುತ್ತಿದ್ದ, ಅದೂ ಸತ್ತು ಹೋದ ತನ್ನ ಅಣ್ಣನ ಆಸ್ತಿಯಲ್ಲಿ... ಅಗಲಿದ ಮಗನ ಆಸ್ತಿ ತನ್ನದೆಂದು ತಿಳಿದೂ ಹೆತ್ತೊಡಲು ಉಳಿದೊಬ್ಬ ಮಗನ ಸಂತೋಷವನ್ನು ಕಿತ್ತುಕೊಳ್ಳದೆ ಕಷ್ಟವನ್ನು ತುಟಿ ಕಚ್ಚಿ ಸಹಿಸಿತ್ತು... 
       ಭಯಂಕರ ಅರ್ಬುದ ರೋಗದಿಂದ ಕೆಲವೇ ದಿನಗಳಲ್ಲಿ ತಾನು ಸಾಯಲಿರುವೆನೆಂದು ತಿಳಿದ ತಂದೆ ತನ್ನೆಲ್ಲ "ಸ್ವಯಾರ್ಜಿತ ಆಸ್ತಿ", ಬ್ಯಾಂಕ್ ಬ್ಯಾಲೆನ್ಸ್ ಗಳನ್ನು ಹೆಂಡತಿಯ ಹೆಸರಿಗೆ ಬರೆದು, ಅವಳ ಕೊನೆಕಾಲದಲ್ಲಿ ಅದನ್ನು ತನ್ನಿಷ್ಟದವರಿಗೆ ಕೊಡಬಹುದೆಂದು ಬರೆದು ಇಹ ಲೋಕ ತ್ಯಜಿಸಿದ್ದ.. ಜೀವವಿದ್ದಾಗ ನೋಡಿಕೊಳ್ಳದ ಮಗ ವಿಷಯ ತಿಳಿದು ಓಡೋಡಿ ಬಂದು 'ಕಣ್ಣೀರು' ಸುರಿಸಿ ತಂದೆಯ ಕಾರ್ಯ ಮುಗಿಸಿ ತಾಯಿಯನ್ನು ಇನ್ನಿಲ್ಲದ ಆಸ್ಥೆಯಿಂದ 'ಇನ್ನು ಒಬ್ಬಳೇ ಇರಬೇಡ.. ನಮಗೆ ನೀನಲ್ಲದೆ ಇನ್ಯಾರಿದ್ದಾರೆ ನಮ್ಮೊಡನೆಯೇ ಇರುವಂತೆ ಬಾ...' ಎಂದು ಕರೆದೊಯ್ದ.... 


**************


ಕೊನೆಯ ಕೊಂಡಿ :
              ಅವಳಿಗೆ ಅವನ ಪ್ರತೀ ಹೆಜ್ಜೆಯ ಮೇಲೆ ಅನುಮಾನ. ಬೇರಾವ ಹುಡುಗಿಯ ಬಳಿ ಮಾತಾಡುವಂತೆಯೇ ಇರಲಿಲ್ಲ. ಅವನ ತಂಗಿಯರ ಜೊತೆ ಆತ್ಮೀಯತೆಯಿಂದ ಮಾತಾಡಿದರೂ ಇವಳು ಅತ್ತು ರಂಪ ಮಾಡಿಬಿಡುತ್ತಿದ್ದಳು. ಅದೊಂದು ವಿಚಾರ ಬಿಟ್ಟರೆ ಇವನಿಗೆ ಅವಳು ಮೆಚ್ಚಿನ ಮಡದಿ. ಬೇರೆಲ್ಲ ವಿಷಯದಲ್ಲಿ ಒಳ್ಳೆಯವಳೇ, ಆದರೆ ವಿನಾ ಕಾರಣ ಅನುಮಾನ ಅವಳನ್ನು ಕಿತ್ತು ತಿನ್ನುತ್ತಿತ್ತು. ಅದೆಷ್ಟೋ ಬಾರಿ ಅವನು ಪ್ರೀತಿಯಿಂದ ಮತ್ತು ಬೈದು ಕೂಡ ತಿಳಿ ಹೇಳಿದ್ದ. ಸುಮ್ಮನೆ ಒಂದು ಕೌನ್ಸೆಲಿಂಗ್ ಗೆ ಹೋಗಿ ಬರೋಣ ಎಂದರೂ ನಾನೇನು ಹುಚ್ಚಿಯಲ್ಲ ಎಂದು ಕೂಗಿದ್ದಳು. ಹಾಗಂತ ಅವಳು ಎಲ್ಲರೊಡನೆಯೂ ಸಲುಗೆಯಿಂದ ಬೇರೆಯುತ್ತಿದ್ದಳು, ಹೆಣ್ಣು - ಗಂಡು ಎಂಬ ಬೇಧವಿಲ್ಲದೇ....! ಸ್ವಭಾವತಃ ಎಲ್ಲರೊಡನೆ ಖುಷಿಯಿಂದ ಹರಟುವ ಅವನು ಅದ್ಯಾವುದಕ್ಕೂ ಅವಳಂತೆ ತಲೆ ಕೆಡಿಸಿಕೊಂಡಿರಲಿಲ್ಲ. ಅವಳು ಮಾತ್ರ ಅವನನ್ನು, ಅವನ ಮೊಬೈಲ್ ಕರೆಗಳನ್ನು ಪರೀಕ್ಷಿಸುವುದು ನಡದೇ ಇತ್ತು. ದಿನಗಳೆಯುತ್ತಾ ಅವನು ತಿಳಿ ಹೇಳುವ, ಅವಳನ್ನು ಸಮಾಧಾನಿಸುವ ತಾಳ್ಮೆ ಕಳೆದುಕೊಳ್ಳುತ್ತಾ ಬಂದ.  ಇಬ್ಬರ ನಡುವಿನ ಒಂದೊಂದೇ ಕೊಂಡಿ ಕಳಚುತ್ತಾ ಬಂದ ಅನುಭವ ಅವಳಿಗಾಗುವ ಹೊತ್ತಿಗೆ ಅವನು ಕೊನೆಯ ಕೊಂಡಿಯನ್ನೂ ಕಿತ್ತೊಗೆಯಲು ಕಾತರನಾಗಿದ್ದ.....

ಕಾವ್ಯಾ :)
(ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಕಥೆಗಳು) 



Tuesday, November 18, 2014

ಯೋಚನಾಲಹರಿಯ ಬೆನ್ನತ್ತಿ......

ಇತ್ತೀಚಿನ ದಿನಗಳಲ್ಲಿ  ಒಂದು ಯೋಚನೆ ಬಹುವಾಗಿ ತಲೆ ಕೊರೆಯುತ್ತಿದೆ. ಮನುಷ್ಯನ ಅಗತ್ಯತೆಗಳು ಅದೆಷ್ಟು ಬೆಳೆಯುತ್ತ ಹೋಗುತ್ತಿದೆಯಲ್ಲ ಎಂದು ಅಚ್ಚರಿಯಾಗುತ್ತಿದೆ. ಜೀವಿಸಲು ಅತ್ಯವಶ್ಯವಾದ ಗಾಳಿ, ನೀರು, ಬಟ್ಟೆ, ಆಹಾರ, ವಸತಿಗಳಿಂದ ಹೊರಟ ಯಾನ ಇದೀಗ ಎಲ್ಲಿ ಬಂದು ನಿಂತಿದೆ....! ಆಧುನಿಕತೆಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳುವ ಹೆಸರಿನಲ್ಲಿ ಮನುಷ್ಯ ಬಹುವಾಗಿ ಬದಲಾಗಿದ್ದಾನೆ. ಅಗತ್ಯತೆಗಳು ಹೆಚ್ಚುತ್ತಿವೆ ಎನ್ನುವುದಕ್ಕಿಂತ ಲೋಭಿಯಾಗುತ್ತಿದ್ದಾನೆ ಎನ್ನಬಹುದೇನೋ..... 



ಹಳ್ಳಿಗಳಲ್ಲಿ ಮೂರ್ಖರ ಪೆಟ್ಟಿಗೆ ಎಂದೇ ಕರೆಯಲ್ಪಡುತ್ತಿದ್ದ ಟಿವಿಗೆ ನಾವೆಷ್ಟು ಒಗ್ಗಿಕೊಂಡುಬಿಟ್ಟಿದ್ದೇವೆಂದರೆ ಪ್ರಸಾರ ವಾಹಿನಿಗಳ ಭೂಪರು ಮಿಲಿಯನೇರ್ ಗಳಾಗುತ್ತಿರುವ ಮಟ್ಟಿಗೆ...! ಇಂದಿನ ದಿನಗಳಲ್ಲಿ ಟಿವಿ ಇಲ್ಲ ಮನೆಯಲ್ಲಿ ಎಂದರೆ 'ಅಬ್ಬಾ! ಟಿವಿ ಇಲ್ಲದೆ ಅದು ಹೇಗೆ ಬದುಕುತ್ತಾರೋ!' ಎಂದು ಕೇಳಿದ ಜನ ಬಾಯ್ಬಿಡುತ್ತಾರೆ. ಸುದ್ದಿಗಾಗಿ ಟಿವಿ ಬೇಕೆಂದೇನು ಇಲ್ಲ. ಪತ್ರಿಕೆಗಳನ್ನು ಓದಿ ಸುದ್ದಿ ತಿಳಿಯಬಹುದು ಮತ್ತು ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು. ಮೂರ್ಖರಂತೆ ತೋರಿಸಿದ್ದನ್ನೆಲ್ಲಾ ನೋಡುವ ನಮ್ಮಂಥವರಿಂದ ವಾಹಿನಿಯವರು ದುಡ್ಡು ಸಂಪಾದಿಸಬಹುದೇ ವಿನಃ ಬೇರೇನೂ ಉಪಯೋಗವಿಲ್ಲ. ಮೂರು - ನಾಲ್ಕು ವರ್ಷದ ಹಸುಳೆಗಳ ಮೇಲೆ ಎರಗಿದ ಕಾಮಾಂಧರ ಸುದ್ದಿಗಳನ್ನೇ ವಾರಗಟ್ಟಲೆ ಬಿತ್ತರಿಸುವ ಮಾಧ್ಯಮಗಳಿಂದ ವಿಕೃತ ಮನಸ್ಸಿನವರ ಕುತೂಹಲ ಕೆರಳಿ ಅಂತಹ ಪ್ರಸಂಗಗಳು ಜಾಸ್ತಿಯಾಗುತ್ತಿವೆ ಎಂಬುದು ನನ್ನ ಅಭಿಮತ.ಇಲ್ಲದಿದ್ದರೆ ಹಸುಳೆಗಳ ಮೇಲಿನ ಇಂತಹ ಹೇಯ ಕೃತ್ಯಗಳನ್ನು ಊಹಿಸಲು ಸಾಧ್ಯವೇ..?! ಇರುವ ಕೆಲಸವನ್ನೆಲ್ಲಾ ಬಿಟ್ಟು ತನ್ನ ಮುಂದೆ ಕೂರಿಸಿಕೊಳ್ಳುವ ಈ ಟಿವಿ ಅಗತ್ಯವಲ್ಲ ನಿಜ....! 

ಇಂದಿನ ದಿನಗಳಲ್ಲಿ ನಮ್ಮ ಕೆಲಸಗಳನ್ನು ತಗ್ಗಿಸಲು ಎಲ್ಲಾ ಕೆಲಸಗಳಿಗೂ ಮಶಿನ್ ಗಳು ಬಂದಿವೆ. ರುಬ್ಬುವ ಕಲ್ಲುಗಳು ಮೂಲೆ ಸೇರಿವೆ. ಅರೆದು ಮಾಡಿದ ಅಡುಗೆ ರುಚಿಯನ್ನು ಮಿಕ್ಸರ್ / ಗ್ರೈಂಡರ್ ಗಳು ಮುಚ್ಚಿ ಹಾಕಿವೆ. ಎಲ್ಲರ ಮನೆಯಲ್ಲೂ ಬಟ್ಟೆ ತೊಳೆಯಲು ಮಶಿನ್, ನೆಲ ಒರೆಸಲು ಕೋಲುಗಳು ಬಂದಿವೆ. ಪರಿಣಾಮ ನಾವು ಮೈ ಬೆಳೆಸುತ್ತಿದ್ದೇವೆ....! ಮನೆಯಲ್ಲೇ ಮೈ ಬಗ್ಗಿಸಿ ನೆಲ ಒರೆಸಿ, ಬಟ್ಟೆ ತೊಳೆಯುವುದೇ ಮುಂತಾದ ಕೆಲಸಗಳಿಂದ ತಾನೇ ತಾನಾಗಿ ಕರಗುತ್ತಿದ್ದ ಕೊಬ್ಬನ್ನು ಕರಗಿಸಲು ಮೇಲಿಂದ ದುಡ್ಡು ಕೊಟ್ಟು ಜಿಮ್ ಸೇರುವ ಕಾಲ ಬಂದಿದೆ. 

'ಪ್ರತಿ ಮನೆಯಲ್ಲೂ ಎಷ್ಟು ಜನರಿದ್ದಾರೋ ಎಲ್ಲರಿಗೂ ಒಂದೊಂದು ಬೈಕ್ ಇರಲೇಬೇಕು. ಜೊತೆಗೆ ಸಂಬಂಧಿಕರೆಲ್ಲರೂ ಕಾರ್ ತೆಗೆದುಕೊಂಡು ಓಡಾಡುವಾಗ  ನಮ್ಮ ಬಳಿ ಇಲ್ಲದಿದ್ದರೆ ಏನು ಚಂದ...  ಅವರೆದುರು ಕೀಳಾಗುವುದಿಲ್ಲವೇ..?!' - ಇಂತಹ ಮನಸ್ಥಿತಿಗಳ ಜೊತೆ ಜೊತೆಗೆ ಟ್ರಾಫಿಕ್ ಕೂಡ ಬೆಳೆಯತೊಡಗಿತು. ಯಾವುದೇ  ವಸ್ತುವನ್ನು ಕೊಳ್ಳುವಾಗ  ಅವಶ್ಯಕವೇ ಎಂದು ಯೋಚಿಸುವ ವ್ಯವಧಾನ ಯಾರಿಗೂ ಇಲ್ಲವಾಗಿದೆ. ಜನರಲ್ಲಿ ಕೊಳ್ಳುಬಾಕ ಸಂಸ್ಕೃತಿ ಹೆಚ್ಚುತ್ತಿದೆ. ಬೇರೊಬ್ಬರ ಮಾತಿಗೆ ತಲೆಕೆಡಿಸಿಕೊಳ್ಳದೆ ನಾವೇ ವಿವೇಚಿಸಿ ನೋಡಿದರೆ ನಮ್ಮ ಅಗತ್ಯತೆಗಳು ನಮಗೆ ತಿಳಿಯುತ್ತವೆ. 

ನಾನು ಈ ವಿಚಾರದ ಕುರಿತು ಚಿಂತಿಸುತ್ತಿರಲು ಕಾರಣವಿದೆ. ಊರಿನಲ್ಲಿ ನಮ್ಮ ಮನೆಗೆ ಒಬ್ಬರು ಪುರೋಹಿತರು ಬರುತ್ತಾರೆ. ಒಳ್ಳೆಯ ಜ್ಞಾನವಂತರು, ಸಂಸ್ಕಾರವಂತರು ಜೊತೆಗೆ ಅಪ್ಪನಿಗೆ ಆತ್ಮೀಯರು, ಹಿತೈಷಿಗಳು. ನನ್ನನ್ನೂ ಸೇರಿ ನನ್ನ ಸೋದರತ್ತೆಯರ ಗುಂಪು ಸೇರಿದರೆ ಹರಟೆ, ಹಾಸ್ಯ, ನಗು ಮುಗಿಯುವುದೇ ಇಲ್ಲ. ಇದೆ ನಮ್ಮ ಹಾಸ್ಯ ನೋಡಿದ ಆ ಪುರೋಹಿತರು ನೀವೆಲ್ಲರೂ ಕೂಡಿ ನಮ್ಮ ಮನೆಗೆ ಒಮ್ಮೆ ಬನ್ನಿ, ಒಳ್ಳೆಯ ಮಾತು-ಕಥೆ ಆಡಿ ಸಮಯ ಕಳೆದು ಬರಬಹುದು ಎಂದು ಆತ್ಮೀಯವಾಗಿ ಆಮಂತ್ರಿಸಿದರು. 'ನಾವು ಬಂದೇ ಬಿಡುತ್ತೇವೆ, ಆಮೇಲೆ ನಿಮಗೇ ತಲೆಕೆಟ್ಟು ನಮ್ಮನ್ನು ಆದಷ್ಟು ಬೇಗ ಸಾಗಹಾಕುತ್ತೀರ' ಎಂದಾಗ... ಅವರು 'ಹಾಗೇನಿಲ್ಲ ಚೆನ್ನಾಗಿರುತ್ತದೆ ಬನ್ನಿ, ಆದರೆ ನಿಮಗೇ ಬೇಜಾರಾಗಿ ಬೇಗ ಹೊರಡಬಹುದು.... ಏಕೆಂದರೆ ನಮ್ಮ ಮನೆಯಲ್ಲಿ ಒಂದೂ ಕುರ್ಚಿಯಿಲ್ಲ.. ಭಾರತೀಯ ಆಸನ ಮಾತ್ರ.... ಟಿವಿ ಕೂಡ ಇಲ್ಲ, ನಮಗೆ  ಅಗತ್ಯವಿಲ್ಲ ಎನಿಸುವ ಯಾವುದೇ ವಸ್ತುಗಳು ನಮ್ಮಲ್ಲಿಲ್ಲ' ಎಂದು ನಕ್ಕರು... ಅಗತ್ಯವೇ ಇಲ್ಲದ ವಸ್ತುಗಳಿಂದ ಏನು ಪ್ರಯೋಜನ ಎಂಬುದು ಅವರ ವಾದ. ಅವರ ವೈಚಾರಿಕತೆ ನನಗೆ ಇಷ್ಟವಾಯ್ತು. ಅವರ ಜೊತೆ ಮಡದಿ ಮತ್ತು ಮಕ್ಕಳೂ ಕೂಡ ಅವರ ವಿಚಾರಧಾರೆಗಳಿಗೆ ತಕ್ಕಂತೆಯೇ ಇರುವ ಪರಿ ಆಶ್ಚರ್ಯವನ್ನೂ ಮೂಡಿಸಿತು. ಯಾವುದೇ ಸಭೆ - ಸಮಾರಂಭಾಕ್ಕಾದರೂ ಆಡಂಬರವಿಲ್ಲದೆ ಸರಳ ಉಡುಗೆಯಲ್ಲೇ ಹೋಗುವ ಹೆಣ್ಣು ಅವರ ಮಡದಿ. ಮಕ್ಕಳು ಮನೆಯಲ್ಲೇ ಗುರುಕುಲ ಅಭ್ಯಾಸ ಮಾಡುತ್ತಿದ್ದಾರಂತೆ. ಶಾಲೆಗೆ ಹೋಗುವುದು ಜ್ಞಾನಾರ್ಜನೆಗೆ ಅಂದ ಮೇಲೆ ಮನೆಯಲ್ಲೇ ಕಲಿತರೇನು ಎಂಬುದು ಅವರ ಭಾವನೆ. ಶಾಲೆಯ ಪಠ್ಯಗಳ ಜೊತೆ ಭಾರತ, ರಾಮಾಯಣ, ಭಗವದ್ಗೀತೆಗಳೂ ಅವರಿಗೆ  ನಿರರ್ಗಳ. ಈಗಿನ ಕಾಲದಲ್ಲಿ ಇಂಥಹ ವ್ಯಕ್ತಿತ್ವದವರು ಇದ್ದಾರಲ್ಲ ಎಂಬ ವಿಷಯ ನನಗೆ ಬಹುವಾಗಿ ಕಾಡಿತು.

ಈ ಕೊಳ್ಳುಬಾಕತೆಯನ್ನು ನಾವು ಅಳವಡಿಸಿಕೊಂಡಿದ್ದಲ್ಲದೆ ನಮ್ಮ ಮಕ್ಕಳಿಗೂ ಕಲಿಸುತ್ತಿದ್ದೇವೆ. ಚಿಕ್ಕವರಿರುವಾಗಲೇ ಅವರಿಗೆ ಕೇಳಿದ್ದೆಲ್ಲ ಕೊಡಿಸುವ ಬದಲು ಅಗತ್ಯ - ಅನಗತ್ಯಗಳ ತಿಳುವಳಿಕೆ ಕೊಡುವುದು ಸೂಕ್ತವಲ್ಲವೇ?? 

ಕಾವ್ಯಾ :) 

Sunday, December 29, 2013

ಮನಸು ಕೊಡೇ ಓ ಹುಡುಗೀ...

    ಜತನದಿಂದ ನೋಡಿಕೊಳ್ಳುವೆ ನಿನ್ನನ್ನ, ನಿನ್ನ ಮನಸನ್ನ ನಾ ಸಾಯುವವರೆಗೂ.... ಅದೇಕೆ ನಾ ಅಷ್ಟು ಕಾಡಿದರೂ ನೀ ತಿರುಗಿ ನೋಡುತ್ತಿಲ್ಲ...? ಇಂದಿಗೆ ನೀ ನನ್ನ ಮನಸೂರೆಗೊಂಡು ಎರಡು ವರ್ಷಗಳು ಕಣೇ...  ನನ್ನ ಮೇಲೆ ಇನ್ನೂ ಕರುಣೆ ಬಂದಿಲ್ಲ ಅಲ್ವಾ ನಿಂಗೆ...?? ನನ್ನ ಮನಸಿನ ಮಾತು ನಿನಗೆ ಕೇಳುತ್ತಲೇ ಇಲ್ಲವಲ್ಲೇ.... ಅದೆಷ್ಟು ಬಾರಿ ನಿನ್ನ ಬಳಿ ಮನ ತೆರೆಯಬೇಕೆಂದುಕೊಂಡೆ ಗೊತ್ತಾ..? ನಿನ್ನೆದುರಲ್ಲಿ ನಿಂತು ಹೇಳಲಾಗದೇ ಹೋದ ನನ್ನೀ ಭಾವನೆಗಳನ್ನು ಓದಿ ಬಯ್ಯಬೇಡ. ನಿನಗೆ ವರಾನ್ವೇಷಣೆ ನಡೆಯುತ್ತಿರುವ ಸುದ್ದಿ ಕೇಳಿ ತಲ್ಲಣಗೊಂಡು ನನ್ನ ಭಾವನೆಗಳನ್ನು ಬಿಚ್ಚಿಡುತ್ತಿದ್ದೇನೆ. ಒಂದು ಕ್ಷಣವಾದರೂ ನೀ ನನ್ನ ಕಣ್ಣುಗಳನ್ನು ನೋಡಿದ್ದರೆ ನಿನಗೇ ನನ್ನಾಳದ ಭಾವನೆಗಳು ತಿಳಿದುಬಿಡುತ್ತಿತ್ತು. ಒಮ್ಮೆ ನಿನ್ನ ಪುಟ್ಟ ಕಂಗಳನ್ನೆತ್ತಿ ನನ್ನ ಕಣ್ಗಳಲ್ಲಿಡು...


    ಯಾವಾಗಲೂ ತಲೆ ಕೆಳಗೆ ಹಾಕಿ ನಿನ್ನಷ್ಟಕ್ಕೆ ನೀನಿದ್ದುಬಿಡುವ, ಗೆಳತಿಯರಿಲ್ಲದೇ ಒಂಟಿಯಾಗಿ ಓಡಾಡಲೇ ತಿಳಿಯದ ನಿನಗೆ ನಾನು ಹೇಗೆ ತಾನೆ ಕಣ್ಣಿಗೆ ಬೀಳಬಲ್ಲೆ ಹೇಳು ?! ನಿನ್ನ ಗೆಳತಿಯರೊಡನೆ ಹರಟುತ್ತಾ ನೀನು ನಗುವಾಗಲೆಲ್ಲಾ ನಾ ನಿನ್ನ ನೋಡುತ್ತೇನೆ. ನಿನ್ನ ಸುಂದರ ದಂತ ಪಂಕ್ತಿಗಳಲ್ಲಿ, ತುಟಿಯಂಚಿನ ಇಳಿಜಾರಿನಲ್ಲಿ ಇಳಿದು ಬಿಡುತ್ತೇನೆ. ಮಳೆಗಾಲದಲ್ಲಿ ನೀ ದಿನವೂ ಮುಡಿವ ಆ ಸೂಜಿ ಮಲ್ಲಿಗೆ ಹೂವಿನ ಘಮ, ಚಳಿಗಾಲದಲ್ಲಿ ನಿನ್ನ ಉದ್ದನೆಯ ಜಡೆಯನ್ನಲಂಕರಿಸುವ ಮಾಗಿ ಮಲ್ಲಿಗೆಯ ಕೆಂಪು-ಬಿಳುಪಿನ ಮಾಲೆ, ಬೇಸಿಗೆಯ ಬೆಳ್ಳಗಿನ ದುಂಡು ಮಲ್ಲಿಗೆ ದಂಡೆ.... ಅಬ್ಬಾ! ಮಲ್ಲಿಗೆಯೊಡನೆ ಪ್ರತಿ ದಿನ ನನ್ನ ನೀ ಹಾದು ಹೋದಾಗಲೆಲ್ಲ ನನ್ನ ನಾ ಮರೆತು ನೀನೇ ನಾನಾಗುತ್ತೇನೆ. ಆ ಹೂಮಾಲೆ ನಿನ್ನ ತಲೆಯನ್ನಲಂಕರಿಸಿದರೆ ನೀನು ನನ್ನ ಹೃದಯವನ್ನಲಂಕರಿಸುತ್ತೀಯ. ಹೂವಿನಂದ ನಿನ್ನ ಮೊಗದ ಲಕ್ಷಣಕ್ಕೆ ಮೆರಗು ನೀಡಿದರೆ, ಅದರ ಘಮ ಮತ್ತು ನಿನ್ನ ಆ ನಗು ನನ್ನ ತನು-ಮನವನ್ನು ಮುದಗೊಳಿಸಿ ನವೋಲ್ಲಾಸ ತುಂಬುತ್ತವೆ. ಒಂದು ದಿನ ನಿನ್ನ ಕಾಣದಿದ್ದರೆ ನಾನು ನಾನಾಗಿರುವುದಿಲ್ಲ ಗೊತ್ತೇನೇ... ದಿನ ಪೂರ್ತಿ ನನ್ನಲ್ಲಿ ಸ್ಮಶಾನ ಮೌನ.....ಎಂದೋ ಒಮ್ಮೊಮ್ಮೆ ನಿನ್ನ ಮಲ್ಲಿಗೆಯಿಲ್ಲದ ಜಡೆಯನ್ನು ಸಹ..!  

    ನಾ ಬರೀ ನಿನ್ನ ಚೆಂದಕ್ಕೆ ಮರುಳಾಗಿಲ್ಲ ಕಣೇ ಹುಡುಗೀ. ನಿನ್ನ ಶಾಂತ ಸ್ವಭಾವ, ಸಿಟ್ಟನ್ನು ಹತ್ತಿರವೂ ಸೇರಿಸದ ಸ್ನಿಗ್ಧ ಮಂದಹಾಸ, ಎಲ್ಲರೊಡನೆ ಹೊಂದಿಕೊಂಡು ಬೆರೆಯುವ ರೀತಿ, ಯಾರು ಏನೇ ಹೇಳಿದರೂ ನಿನ್ನ ತಣ್ಣನೆಯ ಸ್ವರದ, ನಯವಾದ ಪ್ರತಿಕ್ರಿಯೆ, ಎಲ್ಲವನ್ನೂ ನಾನು ಗಮನಿಸಿದ್ದೇನೆ. ನನಗೊಂದೇ ಅಲ್ಲ ನನ್ನ ಮನೆಯವರೊಡನೆ ಕೂಡ ನೀನು ಹೊಂದಿಕೊಳ್ಳಬಲ್ಲೆ ಎಂದು ಮನಗಂಡಿದ್ದೇನೆ. ನೀ ನನಗೆ ಸಾಗರದಷ್ಟು ಪ್ರೀತಿ ಕೊಡಬಲ್ಲೆ, ಅಮ್ಮನಂಥ ಮಡಿಲು ಕೊಡಬಲ್ಲೆ, ಕಷ್ಟದಲ್ಲಿ ಅಪ್ಪನಂತೆ ಹೆಗಲು ಕೊಡಬಲ್ಲೆ, ಪ್ರೀತಿಯ ಕೈ ತುತ್ತಿನಿಂದ ನನ್ನ ಹೊಟ್ಟೆ ತುಂಬಿಸಬಲ್ಲೆ...... ನನ್ನಮ್ಮನೊಡನೆ ಮಗಳಾಗಿ ಹೊಂದಿಕೊಳ್ಳಬಲ್ಲೆ, ನನ್ನಪ್ಪನನ್ನು ಗುರುವಿನಂತೆ  ಗೌರವಿಸಬಲ್ಲೆ, ನನಗೆ ಸದಾ ಪ್ರೀತಿ-ನೆಮ್ಮದಿಯ ಸೋನೆ ಸುರಿಸುವ ಸತಿಯಾಗಬಲ್ಲೆ, ನಮ್ಮ ಮನೆಯನ್ನು ಶಾಂತಿ-ಸಹನೆಯಿಂದ ನಡೆಸಬಲ್ಲೆ... ಇಷ್ಟೆಲ್ಲಾ ನಂಬಿಕೆ ನನಗಿದೆ ಕಣೇ...!! ಇನ್ನೇನು ಬೇಕು  ಹುಡುಗನಾಗಿ ನಾ ನಿನ್ನ ಮೆಚ್ಚಲು ?!

    ನಿನಗೆ ನಾನೂ ಸಹ ಒಳ್ಳೆಯ ಸಖನಾಗುತ್ತೇನೆ. ನನ್ನ ರೆಪ್ಪೆಯಲ್ಲಿಟ್ಟು ನಿನ್ನ ಕಾಪಾಡುತ್ತೇನೆ. ನಿನ್ನ ಪ್ರತೀ ಹೆಜ್ಜೆಗೂ ಹೆಜ್ಜೆಗೂಡಿಸುತ್ತೇನೆ. ನಿನ್ನ ಸುತ್ತಲೂ ಪ್ರೀತಿಯ ದಿಗ್ಬಂಧನ ಮಾಡಿ ಜೋಪಾನ ಮಾಡುತ್ತೇನೆ. ಮಗುವಿನಂತೆ ಮುದ್ದಿಸುತ್ತೇನೆ. ಎಂದಿಗೂ ಬತ್ತದ ಪ್ರೀತಿಯ ಕಡಲಾಗುತ್ತೇನೆ. ಅಷ್ಟೇ ಏಕೆ ಪ್ರತೀ ದಿನ ಮಲ್ಲಿಗೆಯ ಮಾಲೆಯನ್ನು ಮಾಡಿ ನಾನೇ ನಿನ್ನ ಉದ್ದದ ಜಡೆಗೆ ಮುಡಿಸಿ, ನೆಟಿಗೆ ಮುರಿದು ದೃಷ್ಟಿ ತೆಗೆಯುತ್ತೇನೆ. ಇದೆಲ್ಲ ಬರೀ ಪೊಳ್ಳು ಆಶ್ವಾಸನೆಯಲ್ಲ ಹುಡುಗೀ... ಪ್ರಾಯದ ಹಸಿ - ಬಿಸಿ ಪ್ರೇಮವಲ್ಲ ನನ್ನದು... ಪ್ರೌಢ ವಯಸ್ಸಿನ ಪಕ್ವವಾದ ಪ್ರೀತಿಯಿದು. 


    ನಿನಗಾಗಿ ನನ್ನ ಮನೆಯಲ್ಲಿ ಎಲ್ಲಾ ಜಾತಿಯ ಮಲ್ಲಿಗೆ ಗಿಡ ನೆಟ್ಟಿದ್ದೇನೆ. ಸೂಜಿ ಮಲ್ಲಿಗೆ, ಮಾಗಿ ಮಲ್ಲಿಗೆ, ದುಂಡು ಮಲ್ಲಿಗೆ, ಮೈಸೂರು ಮಲ್ಲಿಗೆ,ಮಂಗಳೂರು ಮಲ್ಲಿಗೆ, ಭಟ್ಕಳ ಮಲ್ಲಿಗೆ, ಚಮೇಲಿ, ಅತ್ತರ ಮಲ್ಲಿಗೆ, ಕಸ್ತೂರಿ ಮಲ್ಲಿಗೆ.... ಯಾವುದೂ ಹೂವಾಗದಾದಾಗ ಬೇಕೆಂದು ಕಾಕಡ ಕೂಡ ನೆಟ್ಟಿದ್ದೇನೆ. ಅವೆಲ್ಲಾ ಬಳ್ಳಿಯಾಗಿ ಹಬ್ಬಿ ಹೂ ಬಿಡುವುದರೊಳಗೆ ನಮ್ಮ ಮನೆಯ ಸೇರೊದ್ದು, ನನ್ನ ಮನದ ಕದ ದಬ್ಬಿ ಒಳಗೆ ಬಂದುಬಿಡು ಗೆಳತೀ. ನಿನಗಾಗಿ ಮಲ್ಲೆಗೆಯ ಮಾಲೆ ಕಟ್ಟಿ ನಿನ್ನ ಜಡೆಯನ್ನಲಂಕರಿಸಲು ಕಾತರಿಸಿ ಕಾದಿರುತ್ತೇನೆ. ಒಲ್ಲೆನೆನ್ನದೇ ಬಂದು ಬಿಡೇ ಹುಡುಗೀ .... ನನ್ನ ಪ್ರೀತಿಯ ಕೊಳಕ್ಕೆ ಕಲ್ಲೆಸೆದು ಹೋಗದಿರು... ಇಬ್ಬರ ಪ್ರೀತಿಯ ಕೊಳದಲ್ಲಿ ಜೋಡು ಮಲ್ಲಿಗೆ ತೇಲಿಬಿಡುವ ಬಂದು ಬಿಡೇ ಗೆಳತೀ.... 

Monday, August 5, 2013

ನೀ ಹಾಡಿ ಎನ್ನ ಲಾಲಿಸಿದಾ ಕ್ಷಣ .... 
ನಿನ್ನ ತೋಳಲ್ಲಿ ಜಾರಿದಾ ಮನ .... 
          
           ತನ್ಮಯತೆಯಿತ್ತು ನಿನ್ನ ಸ್ವರದಲ್ಲಿ...... 
           ಪ್ರೀತಿಯುಕ್ಕಿತ್ತು ನನ್ನ ನಯನದಲ್ಲಿ ...... 

ನಿನ್ನಾಳದ ಪ್ರೀತಿ ಮಾಡಿತೆನಗೆ ಮೋಡಿ ..... 
ಅನುನಯಿಸಿದೆ ನೀ ಎನ್ನ ಹಾಡಿ, ಹಾಡಿ ...... 

            ನನ್ನ ನೀ ಬಿಟ್ಟಿರಲಾರೆಯೆಂದು ನಾ ಬಲ್ಲೆ .... 
            ಆದರೆ ಮನ ಬಿಚ್ಚಿ ಹೇಳಲು ನೀ ಒಲ್ಲೆ ..... 

ಈ ಅಕ್ಷರಗಳಿಗೆಂದೂ ನೀನೆ ಸ್ಪೂರ್ತಿ.... 
ಜೀವದ ಪ್ರೀತಿ ಕೊಡುವೆ ನಾ ಮನಸ್ಪೂರ್ತಿ.... 

             ಮುದ್ದಿಸು ಬಾ ನನ್ನ ತೋಳಲ್ಲಿ ತಬ್ಬಿ.... 
             ಓ ನನ್ನ ಮುದ್ದು ಗುಬ್ಬಿ ........... 

ಚಿತ್ರ: ಅಂತರ್ಜಾಲ 

ಕಾವ್ಯಾ :) 

Friday, April 12, 2013

       ಅವಳಿಗಾಗ 21 ವರ್ಷ. ಅದೆಷ್ಟೋ ಹುಡುಗರು ಅವಳನ್ನು ಕದ್ದು ನೋಡುವುದು ಅವಳಿಗೆ ತಿಳಿದೇ ಇತ್ತು... ಅಷ್ಟೇ ಏಕೆ 2-3 ಪ್ರಪೋಸಲ್ ಗಳು ಬಂದು ಅವುಗಳನ್ನು ತಿರಸ್ಕರಿಸಿಯೂ ಆಗಿತ್ತು. ಅವಳೇನು ಅಷ್ಟೊಂದು ಸುಂದರಿಯಲ್ಲ... ಆದರೂ ಹುಡುಗರೇಕೆ ಅವಳ ಹಿಂದೆ ಬೀಳುತ್ತಿದ್ದರೆಂಬುದು ಅವಳಿಗೂ ತಿಳಿಯದ ವಿಷಯ. ಪ್ರೀತಿ ಪ್ರೇಮವೆಂದರೆ ಮಾರು ದೂರವಿದ್ದವಳು ಅವಳು. ಅದೊಂದು ಕೆಟ್ಟ ದಿನ ಒಬ್ಬ ನಿನ್ನನ್ನು ತುಂಬಾ ಪ್ರೀತಿಸುತ್ತೇನೆಂದ. ಮೊದಲು ತಮಾಷೆ ಮಾಡುತ್ತಿದ್ದನೆಂದುಕೊಂಡಳು. ಆಮೇಲೆ ನಿಜವೆಂದು ಗೊತ್ತಾದ ಮೇಲೆ ಎಲ್ಲರಿಗೂ ತಿಳಿ ಹೇಳಿ ನಯವಾಗಿ ತಿರಸ್ಕರಿಸಿದಂತೆ ಅವನಿಗೂ ಹೇಳಿ ಬೇಡವೆಂದಳು. ಅವನು ಆದರೂ ತುಂಬಾ ಪ್ರೀತಿ ನಿವೇದಿಸಿಕೊಂಡ. ಎರಡು ದಿನ ಸುಮ್ಮನಿದ್ದವಳಿಗೆ ಅವನ ನಯ-ವಿನಯ ನಿಧಾನವಾಗಿ ಇಷ್ಟವಾಗತೊಡಗಿತು.... ಒಪ್ಪಿಕೊಂಡೇಬಿಟ್ಟಳು..... ಮನೆಯಲ್ಲಿ ತಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎನ್ನುವ ಗೊಂದಲದ ನಡುವೆಯೇ ಪ್ರೀತಿ ಮೊಳೆತು, ಬೆಳೆಯಿತು. ಇಬ್ಬರೂ ಬೇರೆ ಬೇರೆ ಊರಿನಲ್ಲಿದ್ದರು. ಅದೊಂದು ದಿನ ಅವನು ಅವಳಿದ್ದ ಊರಿಗೆ ಬಂದು ನಾವಿಬ್ಬರೂ ದೂರಾಗೋಣ ಎಂದುಬಿಟ್ಟ. ಇವಳು ತಬ್ಬಿಬ್ಬಾದಳು. ಏಕೆ, ಏನು ಎಂದು ಕೇಳಿದರೆ ಸರಿಯಾದ ಉತ್ತರ ಕೊಡಲಿಲ್ಲ. ಒಮ್ಮೊಮ್ಮೆ ಕೇಳಿದಾಗ ಒಂದೊಂದು ಹಾರಿಕೆಯ ಉತ್ತರ ಕೊಟ್ಟ. ಅವನಾಗೇ ಅವಳ ಜೀವನದಲ್ಲಿ ಬಂದು, ಅವನಾಗೇ ಅವಳ ಕಡೆ ಬೆನ್ನು ಹಾಕಿ ಹೊರಟುಬಿಟ್ಟ..... ಜೀವನದಲ್ಲಿ ಮಾಡಿದ ದೊಡ್ಡ ತಪ್ಪಿನ ಬಗ್ಗೆ ಪಶ್ಚಾತ್ತಾಪ ಪಡಬೇಕೋ, ಮನಸ್ಸಿನಲ್ಲಿನ ಪ್ರೀತಿಯನ್ನು ತೆಗೆದೊಗೆಯಬೇಕೋ ಎಂಬ ಗೊಂದಲ.... ಅವನನ್ನು ಮರೆಯಲು ಅವಳು ತೀರಾ ಕಷ್ಟ ಪಟ್ಟಳು... ಒಳ್ಳೆಯ ಹುಡುಗ ಅದೇಕೆ ಹೀಗೆ ಮಾಡಿದನೋ ಎಂಬುದು ಅವಳಿಗೆ ತಿಳಿಯಲೇ ಇಲ್ಲ... 
       ಅಂತಹ ದುರ್ಬಲ ಮನಸ್ಸಿನಲ್ಲಿರುವಾಗಲೇ ಇನ್ನೊಬ್ಬನ ಆಗಮನ .....! ಪ್ರೀತಿಸುತ್ತೇನೆಂದ... ಇವಳು ಬೇಡವೆಂದಳು... ಅವನು ಬಿಡಲಿಲ್ಲ.. ನಾನೀಗ ಅದನ್ನೆಲ್ಲ ವಿಚಾರ ಮಾಡುವುದಾಗಲೀ, ನಿರ್ಧಾರ ತೆಗೆದುಕೊಳ್ಳುವುದಾಗಲೀ ಮಾಡುವ ಪರಿಸ್ಥಿತಿಯಲ್ಲಿಲ್ಲ ದಯವಿಟ್ಟೂ ಬಿಟ್ಟು ಬಿಡೆಂದಳು. ಅವನು ಬಿಡಲಿಲ್ಲ .... ತನ್ನ ಟೈಮ್ ಚೆನ್ನಾಗಿಲ್ಲ ನನಗೆ ಪ್ರೀತಿ ಪ್ರೇಮದಲ್ಲಿ ಆಸಕ್ತಿಯಿಲ್ಲ ಬಿಡು ಎಂದಳು... 'ಏನೆಂದರು ಮಗ ಹರಿಯೆಂಬುದ ಬಿಡ' ಎಂಬಂತಾದ ಅವ .... ಕೊನೆಗೊಂದು ಅತೀ ಕೆಟ್ಟ ಘಳಿಗೆಯಲ್ಲಿ 'ನೋಡೋಣ ಮನೆಯಲ್ಲಿ ವಿಷಯ ತಿಳಿಸುತ್ತೇನೆ, ಒಪ್ಪಿದರೆ ವಿಚಾರ ಮಾಡುತ್ತೇನೆ'ಎಂದಳು. ಅವಳ ಅಷ್ಟು ಮಾತ್ರ ಉತ್ತರಕ್ಕೆಂದೇ ಕಾಯುತ್ತಿದ್ದಂತೆ ಅವನು ಪ್ರೀತಿ ಪ್ರೇಮವೆಂದು ಅವನು ತುಂಬಾ ಮಾತಾಡತೊಡಗಿದ. ಅವಳಿಗೆ ಒಳಗೊಳಗೇ ಕಸಿವಿಸಿಯಾಗತೊಡಗಿತು.. ಇದೆಲ್ಲದಕ್ಕೂ ಮುಂದೆ ಸಮಯವಿದೆ ದಯವಿಟ್ಟೂ ಸುಮ್ಮನಿದ್ದುಬಿಡು, ಹೀಗೆಲ್ಲ ಮಾತನಾಡಬೇಡ, ಕೆಲವು ದಿನಗಳಲ್ಲಿ ಅಪ್ಪನೊಡನೆ ಮಾತನಾಡುವೆ ಎಂದಳು'... ಅದೆಷ್ಟೇ ಹೇಳಿದರೂ ಅವನು ಸುಮ್ಮನಾಗಲಿಲ್ಲ... ಇವಳಿಗೆ ಮಾತ್ರ ಮನಸ್ಸೇಕೋ ಅವನನ್ನು ಒಪ್ಪುತ್ತಲೇ ಇರಲಿಲ್ಲ. ಉಡಲೂ ಆರದ, ತೊಡಲೂ ಆರದ ಕಷ್ಟದಲ್ಲಿದ್ದಳು. ಕೊನೆಗೂ ಮನೆಯವರೊಡನೆ ಮಾತಾಡಿ ಅವರು ಈ ಮದುವೆಗೆ ಸುತಾರಾಂ ಒಪ್ಪುವುದಿಲ್ಲವೆಂದಾಗ, ಅವಳಿಗಿದ್ದ ಅರ್ಧ ಮನಸ್ಸೂ ಸಹ ಅವನೆಡೆಗೆ ಬೆನ್ನು ಹಾಕಿತು. ಆದರೂ ಅವನನ್ನು ಸಂತೈಸಲು ಯತ್ನಿಸಿದ್ದಳು. ಏನೇ ಮಾಡಿದರೂ ಅವಳ ಜೀವನದ ಅತೀ ಕೆಟ್ಟ ದಿನಗಳು ಆಗಲೇ ಶುರುವಾಗಿದ್ದವು ಅವಳಿಗೆ...! 
       ಅವಳಿಗೆ ತನ್ನ ಮದುವೆಯಲ್ಲಿ ಮನೆಯವರೆಲ್ಲಾ ನಗು-ನಗುತ್ತಾ ಸಂಭ್ರಮದಲ್ಲಿ ಓಡಾಡಬೇಕು, ತಾನದನ್ನು ಕಣ್ತುಂಬಿಕೊಳ್ಳಬೇಕು ಎಂಬುದು ಬುದ್ದಿ ಬಂದಾಗಿನಿಂದ ಬೆಳೆಯುತ್ತಾ ಬಂದ ಮಹಾದಾಸೆಯಗಿತ್ತು. ಮನೆಗೊಬ್ಬಳೇ ಮಗಳು... ಎಲ್ಲರಿಗೂ ಅವಳನ್ನು ಕಂಡರೆ ತುಂಬಾ ಅಕ್ಕರೆ, ಪ್ರೀತಿ... ಅದೆಷ್ಟು ಕಾಡಿ ಬೇಡಿದರೂ , ಬೈದರೂ ಅವನು ತೊಂದರೆ ಕೊಡುವುದನ್ನು ಬಿಡಲಿಲ್ಲ. ಕೇವಲ 1 - 2 ಸಲ ಸಿಕ್ಕಿ ಕೆಲವೇ ನಿಮಿಷಗಳ ಕಾಲ ಸುಮ್ಮನೆ ಮಾತಾಡಿದ್ದನ್ನು ಅವನು ತನ್ನ ಗೆಳೆಯರೊಡಗೂಡಿ ಏನೇನೋ ಕಾಲು ಬಾಲ ಸೇರಿಸಿ ಕಂಡವರಿಗೆಲ್ಲಾ ಹೇಳತೊಡಗಿದ. ಇವಳು ತೀರ ಮಾನಸಿಕ ವೇದನೆ ಅನುಭವಿಸಬೇಕಾಯಿತು. ತಪ್ಪಲ್ಲದ ತಪ್ಪಿಗೆ ಬಹು ದೊಡ್ಡ ಮೊತ್ತದ ನೋವನ್ನು ಅನುಭವಿಸಬೇಕಾಯ್ತು. ಏನೂ ನಡೆಯದೆಯೇ ಜನರಿಂದ ಕಪ್ಪು ಚುಕ್ಕಿ ಪಡೆಯಬೇಕಾಯ್ತು. ಪಾಪ... ದಿನಂಪ್ರತಿ ಅಳುವುದನ್ನು ಬಿಟ್ಟರೆ, ನನ್ನೊಡನೆ 'ನೀನು ಮಾತ್ರ ಈ ತಪ್ಪು ಮಾಡಬೇಡ, ಅದ್ಯಾರೆ ಬಂದು ಪ್ರೀತಿಸುತ್ತೇನೆಂದರೂ ಒಪ್ಪಿಕೊಳ್ಳಬೇಡ ... ಅನುಕಂಪ ಪಡಬೇಡ.. ಈ ಹಾಳು ಅನುಕಂಪದಿಂದಲೇ ನಾನು ಹೀಗಾಗಿದ್ದು... ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸು ಅವರ ಪ್ರೀತಿಯನ್ನ...' ಎನ್ನುತ್ತಿದ್ದಳು. ಅವಳ ರೋಧನೆಯನ್ನು ನನ್ನಿಂದ ನೋಡಲಾಗದೆ ಅದೆಷ್ಟು ಸಂತೈಸಿದ್ದೇನೋ.... ನೆನಪಾದಾಗಲೆಲ್ಲ ನನ್ನ ಮಡಿಲಲ್ಲಿ ಮಲಗಿ ರೋಧಿಸುತ್ತಿದ್ದಳು... ಅವಳು ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಆ ಹುಡುಗನಿಂದ ಬ್ಲಾಕ್ ಮೇಲ್ ಕರೆಗಳು....!ಯಾವುದಕ್ಕೂ ತುಟಿ-ಪಿಟಿಕ್ಕೆನದೇ ಹಲ್ಲು ಕಚ್ಚಿಕೊಂಡಳು...'ಅಬ್ಬಾ ಇವಳ ಹಣೆಬರವೇ' ಎನ್ನುತ್ತಾ ಅವಳನ್ನು ತಬ್ಬಿ ಸಂತೈಸುತ್ತಿದ್ದೆ. ಬರ ಬರುತ್ತಾ ಅವಳು ತೀರ ಕೃಶವಾಗುತ್ತಿದ್ದಳು. ನೋಡಿದವರೆಲ್ಲ ಯಾಕೆ ಹೀಗಾಗಿದ್ದೀಯ ಎಂದು ಕೇಳುವವರೇ.... 'ಇವಳ ಬಾಳ  ದೀಪ ಎಲ್ಲಿದೆಯಪ್ಪ'ಎಂದು ದೇವರಲ್ಲಿ ಕೇಳುತ್ತಿದ್ದೆ....ಅವನಿಗೆ ಇವಳ ಕೆಲವು ವೈಯಕ್ತಿಕ ವಿಷಯಗಳನ್ನು ಇವಳ ತೀರ ಹತ್ತಿರದವರಾರೋ ಹೇಳುತ್ತಿದ್ದರಂತೆ. ಅದನ್ನು ಅವನೇ ಹೇಳಿದ್ದನಂತೆ. ಅದು ಯಾರೆಂದು ನಮಗೆ ಕೊನೆಗೂ ತಿಳಿಯಲೇ ಇಲ್ಲ. ಆದರೆ ಅವರು ಮಾತ್ರ ಚೆನ್ನಾಗಿರಲಾರು. ಇವಳು ಕಂಡ ನೋವು, ಇವಳ ಆ ಕ್ಷಣದ ಬಿಸಿಯುಸಿರು ಅವರನ್ನು ಮಾತ್ರ ಚೆನ್ನಾಗಿರಲು ಬಿಡಲಾರದು...! 
       ಅಂತೂ ಇಂತೂ ದೇವರು ಕಣ್ಣು ತೆರೆದ ಎನಿಸುತ್ತದೆ. ಕ್ರಮೇಣ ಆ ಹುಡುಗನ ಕರೆಗಳು ಕಮ್ಮಿಯಾದವು. ಇವಳೂ ಅದರಿಂದ ಹೊರಗೆ ಬರತೊಡಗಿದಳು. ಅಷ್ಟರಲ್ಲಿ ನನ್ನ ಮದುವೆ ನಿಶ್ಚಯವಾಗಿ ನಾನವಳನ್ನು ಬಿಟ್ಟು ಬರುವ ಕಾಲ ಬಂದಿತ್ತು.. ಇಬ್ಬರೂ ಬೇರೆಯಗುವಾಗ ಅದೆಷ್ಟು ಬೇಸರಿಸಿಕೊಂಡಿದ್ದೆವೋ. ಆದರೆ ಸ್ನೇಹ ಸಾಗರದಿಂದ ಪ್ರೀತಿ ಸಾಗರಕ್ಕೆ ಇಳಿಯಲೇ ಬೇಕಿತ್ತಲ್ಲ... ಆದರೆ ಅವಳೀಗ ಸಂತೋಷವಗಿದ್ದಾಳಲ್ಲ ಎಂಬ ಖುಷಿ ಅವಳನ್ನು ಬಿಡುವ ಬೇಸರಕ್ಕಿಂತ ಹೆಚ್ಚಿತ್ತು. ಅದರೂ ಕೆಲವೊಮ್ಮೆ ನೆನಪಾದಾಗಲೆಲ್ಲ 'ಹಿಂಗಾಯ್ತಲ್ಲೇ ನನ್ನ ಬಾಳಲ್ಲಿ, ಏನೂ ಮಾಡದೆ ಎಲ್ಲರಿಂದ ಮಾತು ಕೇಳಬೇಕಾಯ್ತಲ್ಲೇ' ಎನ್ನುತ್ತಿರುತ್ತಿದ್ದಳು. 
ನಾನು ಮದುವೆಯಾಗಿ ಇತ್ತ ಬಂದಮೇಲೆ ಅವಳಿಗೂ ಅನುರೂಪನಾದ ಹುಡುಗ ಸಿಕ್ಕಿದ. ಅವನಲ್ಲಿ ತನ್ನೆಲ್ಲ ಕಥೆಯನ್ನು ಹೇಳಿಕೊಂಡು, 'ಇದೆಲ್ಲಾ ತಿಳಿದೂ ನನ್ನ ತಪ್ಪಿಲ್ಲ ಎಂಬ ನಂಬಿಕೆಯಿದ್ದರೆ, ಕೊನೆಗೊಂದು ದಿನ ನಮ್ಮ ಜೀವನದಲ್ಲಿ ಅನುಮಾನದ ಅಲೆ ಸುಳಿಯದಿದ್ದರೆ ಮಾತ್ರ'......... ಎಂದಳಂತೆ..... ಅವನು ತುಂಬಾ ಒಳ್ಳೆಯ ಹುಡುಗ. ಇವಳ ಗುಣವನ್ನು ಮೆಚ್ಚಿ ಮದುವೆಯಾದ. 
       ಈಗ ಗಂಡ ಹೆಂಡತಿ ತುಂಬಾ ಚೆನ್ನಾಗಿದ್ದಾರೆ. ಅವನಿಗೆ ಇವಳ ನಗು ಇಷ್ಟವಂತೆ, ಇವಳ ಕಣ್ಣು ಚೆಂದವಂತೆ. ಅವಳ ಬಾಯಲ್ಲಿ ನೆಮ್ಮದಿಯ ನುಡಿಗಳು, ತುಟಿಯಲ್ಲಿ ನಗು ಕಂಡಾಗ ಅದೇನೋ ನೆಮ್ಮದಿ ನನಗೂ.. ಅವರಿಬ್ಬರೂ ನೂರ್ಕಾಲ ಹೀಗೆಯೇ ಬದುಕಿ ಬಾಳಲಿ.. ಹೊಸ ಸಂವತ್ಸರ ಅವರಿಗೆ ಮತ್ತಷ್ಟು ಸಂತಸ ತರಲಿ..... ಲವ್ ಯು ಕಣೆ...... 



ಕಾವ್ಯಾ :)

Thursday, February 14, 2013


ಎನ್ನ ಮನದೊಡೆಯ ನೀನು....
   ನೀ ಬಲ್ಲದಿರೆಯಾ ಮನದಾಳವನ್ನು...
ನಿನಗೆ ತಿಳಿಯದುದೆನ್ನೊಳೇನಿದೆ ಗೆಳೆಯಾ ...
   ಮತ್ತೊಮ್ಮೆ ಹೇಳುತಿರುವೆ ನೀನೆನ್ನ ಇನಿಯ...

ಪ್ರತಿ ಜನ್ಮದಲೂ ನೀನೆನ್ನ ವರಿಸು...
   ಪ್ರೀತಿಯ ಸುಧೆಯ ಹೀಗೆಯೇ ಹರಿಸು...
ಪ್ರತಿ ದಿನ ಎನ್ನ ಹೀಗೆಯೇ ರಮಿಸು...
   ಮಾಡಿದ ತಪ್ಪಿಗೆಲ್ಲ ನೀ ಎನ್ನ ಕ್ಷಮಿಸು...

ಮುತ್ತುಗರೆದೆಬ್ಬಿಸಿ ನೀ, ಎನ್ನ ಮತ್ತೇರಿಸಿ...
   ಮತ್ಯಾಕೆ ಓಡುತಿಹೆ ನೀ, ಮನವ ಹೀಗೆ ಕಾಡಿಸಿ...
ನೋಡಿಲ್ಲಿ, ಹಾಗೆಯೇ ಇದೆ ನಿನ್ನಧರದ ಬಿಸಿ....
   ಎಲ್ಲಿ ಮರೆಯಾದೆ ನೀ, ನನ್ನ ಗಲ್ಲವ ರಂಗೇರಿಸಿ...

ಕಾಡುವೆಯೇಕೆ ಹೀಗೆ ಕನಸಲೂ,
                ಮನಸಲೂ, ನನಸಲೂ....
ಕಾದಿರುವೆ ನಾ, ನಿನ್ನ ಮೋಡಿಗೊಳಗಾಗಲು....
    ಓಡಿ ಬಾ ನೀ, ಎನ್ನ ಮುದ್ದಿಸಲು.... 

ನೀ ಎನ್ನ ಪ್ರಿಯತಮನೆನ್ನಲು,
   ಎನಗೀ ದಿನವೇ ಬೇಕಿಲ್ಲ....
ಪ್ರೀತಿಯ ಸಣ್ಣ ನಿವೇದನೆಗೆ 
   ಇದೊಂದು ನೆಪ ಸಾಕಲ್ಲ...